ಕತ್ತಲು- ಬೆಳಕು (ಕಿರು ಕಥೆ)

31 10 2014

ಹಸಿವೆಂದರೆ ಅಷ್ಟಿಷ್ಟಿಲ್ಲ.ನೀರು ಕುಡಿದು..ಕುಡಿದು,ಕುಡಿದ ನೀರೆಲ್ಲಾ ಬೆವರಾಗಿ ಬಸಿಯುತ್ತಿತ್ತು. ಕೈ- ಕಾಲು ನಡುಗುತ್ತಿದ್ದವು.ಜೋಬೊಳಗೆ ಬಿಡಿಗಾಸಿಲ್ಲ.ಗೆಳೆಯನ ಅಪಾಟ್೯ಮೆಂಟ್ ತಲುಪಲು ಇನ್ನೂ ನಲವತ್ತು ನಿಮಿಷ ನಡೆಯಬೇಕಿತ್ತು.ವಿಪರೀತ ಜನ ಜಂಗುಳಿಯ ಮಧ್ಯ ತಲೆ ತಗ್ಗಿಸಿಕೊಂಡು,ಪುಟ್ ಪಾತ್ ಮೇಲೆ ಭಾರವಾದ ಹೆಜ್ಜೆ ಕಿತ್ತಿಡುತ್ತಲೇ ಹಿಂದಿನ ದಿನ ನಡೆದ ಘಟನೆಗಳ ಮತ್ತೆ..ಮತ್ತೆ ನೆನಪಿಸಿಕೊಳ್ಳುತ್ತಾ ಸಾಗಿದೆ.
“ಲೇ ನನ್ನ ಮಾತು ಕೇಳು,ನಿನಗೀಗ ಇರೋದು ಒಂದೇ ದಾರಿ. ನಾವಾದ್ರೂ ಇಲ್ಲಿ ಬದುಕುಳಿಯಬೇಕು ಅಂದ್ರೆ;ನೀನು ಸತ್ತರೆ ಮಾತ್ರ ಸಾಧ್ಯ. ಸಾಲ ಕೊಟ್ಟವರು ಸುಮ್ಮನೇ ಬಿಡ್ತಾರೆ ಅಂದುಕೊಂಡೆಯಾ? ನಿನ್ನ ಸಲುವಾಗಿ ಮನೆಯವರನ್ನೆಲ್ಲಾ ಸಾಯಿಸಬೇಡ” ಹೀಗಂತ ಸ್ವಂತ ತಂದೆಯೇ ಸಾಯೋ ಸಲಹೆ ಕೊಟ್ಟಾಗ? ಎದೆಗೆ ಉಕ್ಕಿ ಬಂದ ದುಃಖವನ್ನ ಗೋಡೆಯಲ್ಲಿ ಚಿತ್ರವಾಗಿದ್ದ ಅವ್ವ ಮಾತ್ರ ಅರ್ಥಮಾಡಿಕೊಂಡಿರಬೇಕು.ನಾನು”ಹೂಂ” ಅಂತ ದೊಡ್ಡದೊಂದು ನಿಟ್ಟುಸಿರಾಕಿ;ನಡೋ ಪಡಸಾಲಿಗೆ ಹಳೆಯ ಲುಂಗಿ ಹಾಸಿ,ಒಂದಷ್ಟು ಪುಸ್ತಕ,ಬಟ್ಟೆ ಹಾಕಿ,ಮಡಿವಾಳರ ಗಂಟಂತೆ ಕಟ್ಟಿಕೊಂಡು ಊರು ಬಿಟ್ಟೆ. ಅನಾಮತ್ತು ಇಪ್ಪತ್ತೆಂಟು ಲಕ್ಷಕ್ಕೆ ಸಾಲಗಾರನಾಗಿ ಸಾಯಲು ನಿರ್ಧರಿಸಿದ ನನ್ನ ಕೊನೆಯ ಆಸೆ, ಬಡವಿ ಬಾಣಂತಿಯಾಗಿದ್ದ ನನ್ನ ಹೆಂಡತಿ ಮತ್ತುಮಗುವನ್ನ ನೋಡಿಕೊಂಡು ಬರುವುದಾಗಿತ್ತು.ಅಂತೆಯೇ ಮುಸ್ಸಂಜೆ ಹೆಂಡತಿ ಊರಿಗೆ ಬಸ್ಸೇರಿ ಹೊರಟೆ.
ಆಕೆಯ ಊರು ತಲುಪಿದಾಗ;ರಾತ್ರಿ ಹನ್ನೊಂದು ಅನ್ಸುತ್ತೆ. ಸಣ್ಣ ಮನೆ, ಮಳೆ ಬೇರೆ ಬರ್ತಿತ್ತು.ಬಾಗಿಲು ಬಡಿದೆ.ದೀಪ ಹಿಡಿದು ಹೆಂಡತಿಯ ತಮ್ಮ ಕದ ತೆರೆದ.ಅವ್ವ ಮಾವ ಬಂದಿದೆ ಅಂದ.ಕಾಲೊರಿಸಿಕೊಳ್ಳುವ ಜಾಗದಲ್ಲೇ ಹಾಸಿದ ಹಾಸಿಗೆಯನ್ನ ಅವರಮ್ಮ ಸುತ್ತುತ್ತಾ..”ಬಾ ತಮ್ಮ” ಎಂದು ಸೆರಗೊದ್ದು ಒಳಗೆಕರೆದರು.ಈಕೆ ಕಿವಿಗೆ ಹತ್ತಿ ಇಟ್ಟುಕೊಂಡು,ಹೋಳು ಮಗ್ಗಲು ಮಲಗಿ ನಿದ್ರೆ ಹೋಗಿದ್ದಳು. “ಪಾಪು ತುಂಬಾ ಅಳುತ್ತೆ ತಮ್ಮ..ತಾಯಿ ಮಗಳು ಈಗ ಮಲಗಿದ್ದಾರೆ ನೋಡು,ಪ್ರೇಮ..ಹೇ ಪ್ರೇಮ..ತಮ್ಮ ಬಂದಿದೆ ನೋಡು” ಅಂತ ಅವಳನ್ನ ಎಬ್ಬಿಸಿಯೇ ಬಿಟ್ಟರು. ಮುಲುಕುತ್ತಾ ಎದ್ದ ಪ್ರೇಮ; “ಏನ್ರೀ..ಇಷ್ಟೊತ್ತಲ್ಲಿ.? ಉಣ್ಣಕ್ಕಿಟ್ಟುಕೊಡ್ಲಾ..! ಈಗ ಬಂದ್ರಾ ಅಂತ ಎದ್ದು ಅಡುಗೆ ಕೋಣೆಗೆ ಕರ್ಕೊಂಡು ಹೋಗಿ ಕುಡಿಯೋಕೆ ನೀರು ಕೊಟ್ಟಳು.ನೀರು ಕುಡಿದು ಅಲ್ಲೇ ಕುಳಿತೆ.ಇವಳು ಪಾಪು ಎತ್ತಿಕೊಂಡು ಮತ್ತೆ ಒಳ ಬಂದಳು.ದೀಪದ ಬೆಳಕಲ್ಲಿ ಮಗಳ ಮುಖ ತೋರಿಸಿ.ಎಲ್ಲ ನಿಮ್ಮಂಗ ಐತಿ ನೋಡ್ರಿ.ಅಯ್ಯನೋರು ಅದ್ರುಷ್ಟವಂತಳು ಅಂತ ಹೇಳ್ಯಾರ ಅಂತ ಮಗಳನ್ನ ನನ್ನ ತೊಡೆಯ ಮೇಲೆ ಹಾಕಿದಳು.ಕತ್ತಲಲ್ಲಿ ನನ್ನ ಕಣ್ಣ ಹನಿ ಪಾಪುವಿನ ಕೆನ್ನೆಯ ಮೇಲೆ ಬಿತ್ತೋ..ಏನೋ? ಅದಕ್ಕೆ ಎಚ್ಚರವಾಗಿ ಅಳಲು ಪ್ರಾರಂಭಿಸಿತು. ಅವಳು ಪುನಹ ಎತ್ತಿಕೊಂಡು ಮೊಲೆಗೆ ಹಾಕಿಕೊಂಡಳು. “ಯಾಕ್ರಿ ಪೋನ್ ಕೂಡ ಮಾಡದಂಗೆ ಬಂದ್ರಿ..? ನಿನ್ನೆ ಇಂದ ನಿಮ್ಮ ಮೊಬೈಲ್ ಸ್ವಿಚ್ ಆಫ್ ಬೇರೆ ಇದೆ.ಏನ್ ಸಮಚಾರ..? ಯಾಕ್ ಒಂದು ಥರಾ..ಇದ್ದೀರಲ್ಲಾ? ಅವಳ ಪ್ರಶ್ನೆಗಳಿಗೆ ನನ್ನಲ್ಲಿಉತ್ತರವೇ ಇರಲಿಲ್ಲ.
ಅವರಮ್ಮ ಹಾಗೂ ಈಕೆಯ ತಮ್ಮ ಹಾಸಿಗೆ ಸುತ್ತಿಕೊಂಡು ಎದುರು ಮನೆಯ ಹೆಂಚಿನ ಕಟ್ಟೆಯ ಮೇಲೆ ಮಲಗಲು ಹೋಗಲು ಅನುವಾಗಿ,”ಪ್ರೇಮ ಕದ ಹಾಕಿಕೋ..ಪಾಪು ಅತ್ತರೆ ಕರಿ” ಅಂತ ಅವರಮ್ಮ ಹೇಳೋದನ್ನೇ ಕಾಯಿತ್ತಿದ್ದವನು ಒಮ್ಮೆಲೇ ಅವಳನ್ನ ಅಮ್ಮನಂತೆ ತಬ್ಬಿ ಅತ್ತು ಬಿಟ್ಟೆ.ಅವಳು ಯಾಕ್ರೀ..ಏನಾಯಿತು..ಅಂತ ಕಣ್ಣೀರು ಒರೆಸುತ್ತಲೇ ಸಂಕಟ ಪಟ್ಟುಕೊಂಡೇ ನನ್ನ ಸಮಾಧಾನ ಪಡಿಸುತ್ತಿದ್ದಳು.
ಪ್ರೇಮ ಬಳ್ಳಾರಿಯ ದೊಡ್ಡ ರಾಜಕಾರಣಿಯ ಪಿ.ಎ.ಒಬ್ಬನಿಗೆ ಲಿಕ್ಕರ್ ಮಾಡಿಸಿಕೊಡಲು ಇಪ್ಪತ್ತೆಂಟು ಲಕ್ಷ ಹಣ ಕೊಟ್ಟಿದ್ದೆ,ಎಲ್ಲವೂ ಸಾಲ ರೂಪದಲ್ಲೇ ತಂದ್ದದ್ದು.ಆತ ಮೊನ್ನೆ ದಿನ ಹಾಟ್೯ ಅಟ್ಯಾಕ್ ಆಗಿ ಸತ್ತಿದ್ದಾನೆ.ಹಣ ಕೊಟ್ಟಿದ್ದಕ್ಕೆ ನನ್ನಲ್ಲಿ ಏನೂ ಸಾಕ್ಷಿ ಇಲ್ಲ. ಈಗ ಲೈಸನ್ಸೂ ಇಲ್ಲ,ಹಣನೂ ಇಲ್ಲ.ಸಾಲ ಗಾರರಿಗೆ ಹಣ ಮುಟ್ಟಿಸೋದು ಹೇಗೆ..? ನನ್ನ ಮನೆ..ಹೊಲ ಮಾರಿದರೂ ಸಾಲ ತೀರೋದಿಲ್ಲ. ನಿಜಕ್ಕೂ ತುಂಬಾ ಸಂಕಟವಾಗಿ ನಿನ್ನಲ್ಲಿ ಅಳುವ ಸಲುವಾಗಿ ಬಂದೆ, ಅಂದಾಗ; ಅವಳು ನನ್ನ ಕೈ ಹಿಡಿದುಕೊಂಡು ಗುಬ್ಬಿ ಮರಿಯಂತಾಗಿಬಿಟ್ಟಳು.
ಬಿಡಿ ದೇವರಿದ್ದಾನೆ, ಭಿಕ್ಷೆ ಬೇಡಿಯಾದ್ರು ಬದುಕೋಣ.ಸಾಯೋ ಮಾತೇಕೆ..? ನಾವೇನೂ ಕುಂಟ್ರಾ..ಕುರುಡರಾ…ಜೀವನ ಪೂರ್ತಿ ಸಾಲಕ್ಕೋಸ್ಕರ ದುಡಿಯೋಣ ಬಿಡಿ.ನಮಗೆ ಸೋಲು ಬಂದಾಗ ಸಂಬಂಧ ಸ್ನೇಹಗಳು, ನಮ್ಮನ್ನು ಅವಮಾನಿಸಿ ಗಟ್ಟಿಗೊಳಿಸುತ್ತವೆ ಎಂದು ತಿಳಿದುಕೊಳ್ಳಬೇಕೋ ವಿನಃ, ಅಪ್ಪ ಹೀಗಂದ.ಅಣ್ಣ ಹೀಗಂದ..ನನ್ನ ಜೊತೆಗಾರರೇ ಹೀಗಂದರು ಅಂತ ನಾವು ಯಾವತ್ತೂ ಯೋಚಿಸಬಾರದು ರೀ..! ಬಡತನ ನನಗೆ ಬದುಕುವುದ ಕಲಿಸಿ ಕೊಟ್ಟಿದೆ. ನೀವು ಏನು ಅಂತ ನನಗೆ ಗೊತ್ತು, ಜನ್ಮ ಕೊಟ್ಟವರಿಗೆ ನೀವು ಅಥ೯ ಆಗಿರಲಿಕ್ಕಿಲ್ಲ.ದೇಹ ಕೊಟ್ಟವಳಿಗೆ ಅಥ೯ ಆಗಿದ್ದೀರಿ.ಎಲ್ಲರೂ ಒಂದು ದಿನ ಸಾಯಲೇ ಬೇಕು, ಅಂದಾಗ ನಾವೇ ನಾವೇಕೆ ಸಾಯೋದು? ಬಿಡಿ ಸಾವು ತಾನಾಗೇ ಬರೋವರೆಗೂ ಬದುಕಿರೋಣ.ಬಹಳ ಅಂದ್ರೆ ಏನ್ ಆಗುತ್ತೆ? ಹೊಲ..ಮನಿ ಹೋಗುತ್ತೆ. ಸಂಬಂಧಿಗಳಿಗೆ ಇವರಂಗೆ ಯಾರೂ ಹುಂಬತನಕ್ಕೆ ಹೋಗಬಾರ್ದು ಅನ್ನೋದಕ್ಕೆ ಉದಾಹರಣೆ ಆಗುತ್ತೆ ಅಷ್ಟೇ ತಾನೆ..? ಬಿಡಿ ಹೊಸ ಸಂಬಂಧ,,ಹೊಸ ಸ್ನೇಹ..ಹೊಸ ಬದುಕನ್ನ ಕಟ್ಟಿಕೊಳ್ಳೋದನ್ನ ನಿಮ್ಗೆ ನಾನು ಹೇಳಿಕೊಡಬೇಕಾ? ಬಡತನದ ಬೇಗೆಯಲ್ಲಿ,ಮೂಡರ ಕುಟುಂಬದಲ್ಲಿನನ್ನ ದೇವದಾಸಿ ಬಿಡುವ ಸಂದರ್ಭದಲ್ಲಿ ಬಾಳು ಕೊಟ್ಟು ಕೈ ಹಿಡಿದ ನೀವು ಸಾಯೋದಾ? ಅವ್ರಿವರ ಮನೆಯ ಕಸ..ಮುಸುರೆ ಮಾಡಿ ಮಕ್ಕಳನ್ನ ನಿಮ್ಮನ್ನ ಸಾಕ್ತೀನಿ.,ಹೆದರ ಬೇಡಿ. ಸಾಯೋಕೆ ಇರೋ ಧೈರ್ಯದಲ್ಲಿ ಒಂದು ಭಾಗ ಧರ್ಯ ಸಾಕು ಬದುಕೋಕೆ.ಅವಳು ಹೇಳ್ತಾ ಹೋಗುತ್ತಿದ್ದಂತೆ ನನ್ನ ಮೈ ಕೂದಲುಗಳು ನೆಟ್ಟಗಾಗುತ್ತಿದ್ದವು.ನನ್ನವ್ವಳೇ ಇವಳಲ್ಲಿದ್ದಾಳಾ..ಈಗ? ಅಂತ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.ಅಷ್ಟೊತ್ತಲ್ಲೇ ಗೆಳೆಯನೊಬ್ಬನಿಗೆ ಮೊಬೈಲ್ ಆನ್ ಮಾಡಿ ಕರೆ ಮಾಡಿದೆ, ಆ ಕಡೆ ಇಂದ “ಏನೋ ಇಷ್ಟೊತ್ತಿನಲ್ಲಿ? ಹತ್ತು ನಿಮಿಷದಲ್ಲಿ ಬಿಕ್ಕುತ್ತಾ ನನ್ನೆಲ್ಲಾ ಕತೆ ಹೇಳಿ ಮುಗಿಸಿದೆ.”ತಂದೆ ನಿನ್ನ ಕತಿ ಕನ್ನಡದ ಹಳೇ ಸಿನಿಮಾ ಇದ್ದಂಗೆ ಇದೆ, ನನ್ನಿಂದ ಈಗ್ ಏನ್ ಆಗಬೇಕು ಹೇಳು” ಅಂದ.ಯಾಕೋ..ಮನಸ್ಸು ಚುಚ್ಚಿದಂಗೆ ಆಗಿ ಪೋನ್ ಕಟ್ ಮಾಡಿದೆ. ಮತ್ತೆ ಅವನೇ ಪೋನ್ ಮಾಡಿದ.”ಹೇಳಲೇ ಸೂಳೇ ಮಗಂದು ನೆಟ್ವರ್ಕ್ ಸರಿ ಇಲ್ಲ.ಬೊಗಳು ಎನಾ ಹೇಳ್ತಿದ್ದೆಲ್ಲಾ?” ಅಂದ.”ಏನಿಲ್ಲ ಬಿಡು” ಅನ್ನೋದ್ರೊಳಗೆ..”ಲೇ ಸುದೀಪ್ ತರ ನೆಗಡಿ ಬಂದೋರಂಗೆ ಮಾತಾಡ್ಬೇಡ, ಈಗೇನ್ ತಾವು ಇಪ್ಪತ್ತೆಂಟು ಲಕ್ಷ ಸಾಲ ಮಾಡಿಕೊಂಡೀರಿ. ಸೋ..ತಾವು ಊರು ಬಿಡ್ತಿದ್ದಿರಿ..ತಮಗೊಂದು ಕೆಲ್ಸ ಬೇಕು? ಬೋಳೀ ಮಗನೇ ಹಡಗಲಿ ಯಲ್ಲಿದ್ದ ಪೆಟ್ರೋಲ್ ಬಂಕ್ ನ ಅಪ್ಪ ಸತ್ತಮೇಲೆ ಮಾರಿ ಅಕೌಂಟ್ ನಲ್ಲಿ ಇಪ್ಪತೈದು ಲಕ್ಷ ಹಂಗೆ ಇಟ್ಟೀನಿ.ನಾಳೆ ಬೆಂಗಳೂರಿಗೆ ಬಾ ಒಂದು ರೌಂಡು ಎಣ್ಣೆ ಹೊಡುಕೊಂಡು ಚೆಕ್ ..ಇಸ್ಕೊಂಡು ಹೋಗುವಂತಿ. ಲೇ ಬರೋವಾಗ ರೊಟ್ಟಿ,ಕಡ್ಲಿ ಪುಡಿ ತಗೊಂಡು ಬಾ..ಅಂದಾಗ..! ನಾನು ಪೋನ್ ಇಟ್ಟು ಬಿಕ್ಕಳಿಸುತ್ತಿದ್ದರೆ;ನನ್ನ ಹೆಂಡತಿ ರೊಟ್ಟಿ ಸುಡಲು ಕೊಣಗೆ ಕೆಳಗೆ ಇಳಿಸಿ ಕೊಂಡಿದ್ದಳು.
ಜೋಬಲ್ಲಿದ್ದ ಮೊಬೈಲ್ ರಿಂಗಾಯಿತು. ಹಲೋ,,,”ಲೇ ಯಲ್ಲದಿ..ಹೊಟ್ಟೆ ಹಸಿದು ಸಯಾಕತ್ತಿನಿ..ನಿನ್ನ ರೊಟ್ಟಿ ನಂಬಿ,.ಮಗನೇ ಬಂದೆ-ಬಂದೆ ಅಂತಿಯಾ? “ಬಂದೆಲೇ,,ಇನ್ನೆರೆಡು ನಿಮಿಷ ನಿನ್ನ ಅಪಾಟ್೯ಮೆಂಟ್ ಬಂತು.
-ನಾಗು,ತಳವಾರ್





ಯಾವ ಬಂಧನಗಳಲ್ಲಿವೆ? ಇಂದಿನ ಸಂಬಂಧಗಳು….!

27 04 2014

ಯಾವ ಬಂಧನಗಳಲ್ಲಿವೆ? ಇಂದಿನ ಸಂಬಂಧಗಳು….!
————————————————

ಆತ ಆ ಕಡೆಯಿಂದ ಒಂದೇ ಸಮನೆ ದೂರವಾಣಿಯಲ್ಲಿ ಬಿಡುವಿಲ್ಲದೆ “ಇಲ್ಲ ಕಣೋ ನನ್ನಿಂದ ಸಾಧ್ಯವಾಗುತ್ತಿಲ್ಲ,ನನಗೆ ಡೈವೋರ್ಸ್ ಕೊಡಿಸಿ ಬಿಡು , ನಿನಗೆ ಕಾಲಿಗೆ ಬೀಳುತ್ತೇನೆ.ಯಾವನಿಗೆ ಬೇಕು ಈ ಸಂಸಾರ..? ನನಗೆ ಉಸಿರು ಕಟ್ಟಿಸಿಬಿಟ್ಟಿದೆ..ಪ್ಲೀಜ್ ಮರಾಯ ನನಗೆ ಬಿಡುಗಡೆ ಬೇಕು,ಈ ಬಂಧನದಿಂದ.”ಎಂದು ಗದ್ಗದಿತನಾಗಿ ರಾತ್ರಿ ಮಲಗುವ ಮುನ್ನ ಬಿಕ್ಕಳಿಸಿಸುತ್ತಾ..ಹೇಳುತ್ತಿದರೆ: “ಇಷ್ಟೊತ್ತಿನಲ್ಲಿ ಆ ಪೇಪರ್ ಸಿಗೊಲ್ಲ,ಬೆಳಿಗ್ಗೆ ನೋಡೋಣ ಮಲಗು” ಅಂತ ಪೋನಿಟ್ಟೆ.ಪಕ್ಕದಲ್ಲಿ ಮಲಗಿದಂತೆ..ಮಲಗಿರದ ನನ್ನ ಶ್ರೀಮತಿ “ಯಾರ್ದುರೀ ಇಷ್ಟೊತ್ತಿನಲ್ಲಿ ಫೋನ್,ಯಾವ್ ಪೇಪರ್..?” ಅಂದಳು. ಜನಾರ್ದನ್ ರೆಡ್ಡಿ ಮೈನಿಂಗ್ ಪೇಪರ್.,ಇಲ್ಲೇ ಬೀರುವಿನಲ್ಲಿ ಇಟ್ಟಿದ್ದೆ,,ನೋಡಿದೆಯಾ..? ಅಂದೆ. ನನ್ಗೆ ಗೊತ್ತಿಲ್ಲ ಅಂತ ರಗ್ಗು ಹೊದ್ದು ಮಲಗಿದಳು.ಈ ಹೆಂಗಸಿರಿಗೆ ಅದೇನು ಚಾಳಿಯೋ..!ಯಾವುದೇ ಪೋನ್..ಬರ್ಲಿ.ಯಾರ್ದು..? ಏನಂತೆ..! ಅಂತ ಕೇಳದೇ ಹೋದ್ರೆ ಖಂಡಿತ..ಅವರಿಗೆ ಉಂಡ ಅನ್ನ ಜೀಣ೯ ಆಗೋದಿಲ್ಲ ಅಂತೀನಿ.
ಅಂದ ಹಾಗೆ ಈ ಪೋನ್ ನಲ್ಲಿ ಮಾತಾಡಿದ ಮಹಾಶಯ ಮದುವೆ ಆಗಿ ಎಂಟು ವಷ೯ ಆಯಿತು.ವಷ೯ದಲ್ಲಿ ಈ ಗಂಡ ಹೆಂಡತಿ ಆರೇಳು ಬಾರಿಯಾದ್ರು ಕಿತ್ತಾಡಿಕೊಂಡು, ಆ ತಾಯಿ ಅವರಪ್ಪಾಜಿ ಬಳಿ “ನನೆಗೆ ಡೈವೋರ್ಸ್ ಕೊಡಿಸಿ” ಅಂದಿರ್ತಾಳೆ,ಇವನು ನನಗೆ ಅದೇನ್ ಮಾಡ್ತಿಯೋ ಗೊತ್ತಿಲ್ಲ, ಬಿಡುಗಡೆ ಬೇಕು..ಅಂತ ಕೇಳ್ತಿರ್ತಾನೆ.ಆದ್ದರಿಂದ ಇವರ ಬಗ್ಗೆ ನಾನು ಅಷ್ಟೊಂದು ಸ್ಸೀರಿಯಸ್ ಆಗಿ ಯೊಚಿಸಲ್ಲ.ಆದ್ರೆ ಈ ಬಾರಿ ಕೊಂಚ ಡಿಪೆರೆಂಟ್ ವಾಯ್ಸ್ ನಲ್ಲಿ ಡೈವೋರ್ಸ್ ಕೇಳಿದ ನಿಮಿತ್ತ..ನಾನು ಒಂದಷ್ಟು ಆತಂಕದಿಂದಲೇ ಬೆಳಗಿನ ಪತ್ರಿಕೆಯನ್ನ ನೋಡಿದೆ, ಅಬ್ಭ ..ಯಾವ ಆತ್ಮ ಹತ್ಯಯ ಸುದ್ದಿ ಇಲ್ಲ. ನಂತರ ಮೊಬೈಲ್ ಆನ್ ಮಾಡಿದೆ. ಉಹುಂ..ಅಲ್ಲಿಯೂ ಯಾವ ಕೊನೆಯ ವಿದಾಯದ ಮೆಸೇಜ್ ಇರಲಿಲ್ಲ.ಆಗ ಸಮಾಧಾನವಾಗಿ ಎಂದಿನ ದಿನಚರಿಗೆ ಸಜ್ಜಾದೆ.
ಹೊಲದ ಬಯಲ ವಿಸರ್ಜನೆಗೆ ಕಾಲು ಮಡಚಿ ಕೂತ ಹೊತ್ತಲ್ಲಿ ಹಾಗೇ ಯೋಚಿಸುತ್ತ ಹೋದೆ.ಹೌದು ಎತ್ತ ಹೋಗುತ್ತಿದೆ ಸಂಬಂಧಗಳ ಆ ದಿವ್ಯ ಅನುಬಂಧ..?ಆಗಿನ ಅವಿದ್ಯಾವಂತ ಅವಿಭಕ್ತ ಕುಟುಂಬಗಳಿಗೂ,ಈ ಗಿನ ವಿದ್ಯಾವಂತ ವಿಭಕ್ತ ಕುಟುಂಬಕ್ಕೂ..ಅದೆಲ್ಲಿಂದೆಲ್ಲಿಯ ಸಂಬಂಧ? ದೊಡ್ಡಪ್ಪ..ಚಿಕ್ಕಪ್ಪ..ಮಾವ..ಅತ್ತೆ ಎಂದು ಕುಲವಲ್ಲದವರೂ ಊರೊಳಗೆ ಸಂಬಂಧದ ಬೆಸುಗೆ ಹೆಣೆದು ಸದ್ಭಾವನೆ ಬೆಳೆಸಿ,ಮದುವೆ-ಮುಂಜಿಗಳನ್ನ ಅವರೇ ನಿಂತು ಮಾಡುತ್ತಿದ್ದರು.ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಉಣ್ಣುವ,ಹಬ್ಬಕ್ಕೆ ಮನೆಯಲ್ಲಿ ಎಲ್ಲಾ ಮಕ್ಕಳಿಗೂ ಒಂದೇ ಬಟ್ಟೆ ಹೊಲಿಸಿ ಒಗ್ಗಟ್ಟು.,ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುವ ಕಲೆ ಹೊಂದಿದ್ದರು.ಮಗುವನ್ನು ಆಡಿಸಲು ಅಜ್ಜ..ಅಜ್ಜಿ.ಕಾಳು -ಕಡಿ ಹಸನುಗೊಳಿಸಲು ದೊಡ್ಡಮ್ಮ,ಚಿಕ್ಕಮ್ಮ ಅಡುಗೆ ಮಾಡಲು ಅಮ್ಮ.ಕಟ್ಟಿಗೆ ಹೊಡೆಯಲು ಚಿಕ್ಕಪ್ಪ,ಪೇಟೆ ಇಂದ ಸಂತೆ-ಸಾಮಾಗ್ರಿ ತರಲು ದೊಡ್ಡಪ್ಪ. ಹೊಲದ ವ್ಯವಸಾಯಕ್ಕೆ ಅಪ್ಪ… ಹೀಗೆ ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯಲ್ಲಿ ಅದೆಷ್ಟು ಚಂದದ ಬದುಕನ್ನ ನಮ್ಮ ಕಣ್ಮುಂದೆ ಅವರು ಕಟ್ಟಿಕೊಟ್ಟಿದ್ದರು..? ಅವರೆಲ್ಲಾ ವಿಶ್ವಾಸದ ಸಂಬಂಧಗಳಿಗೆ ಹಾಗೂ ಪ್ರಾಮಾಣಿಕವಾದ ಜೀವನ ಪ್ರೀತಿಗೆ ಬದುಕಿದವರು. ಈಗಿನವರೋ ದುಡ್ಡಿಗೆ;ಅದರ ಬಡ್ಡಿಗೆ..ಬಡಿವಾರಕ್ಕೆ ಮೌಲ್ಯಗಳನ್ನೆಲ್ಲಾ ಮಣ್ಣು ಮಾಡಿ,ಸ್ವೇಚ್ಚೆಯ ಬದುಕ ಬಯಸಿ.ನೌಕರಿಯ ನೆಪವೊಡ್ಡಿ..ಕೃಷಿಯ ತೊರೆದು, ನಗರ ಸೇರಿ ನರಳುತ್ತಾ.. ಹೀಗೆ; ಅರೆ-ಬರೆ ಬುದ್ದಿವಂತರಂಥಹ ನಮ್ಮಂಥವರಿಗೆ ದೂರವಾಣಿ ಕರೆ ಮಾಡಿ ಡೈವೋರ್ಸ್ ಕೇಳದೇ ಏನು ಮಾಡುತ್ತಾರೆ..? ಹೌದು ಅವಿಭಕ್ತ ಕುಟುಂಬಗಳಲ್ಲಿ ಜಗಳ,ಮುನಿಸು ದುಃಖಗಳಿರುತ್ತಿರಲಿಲ್ಲ ಅಂತ ಅಲ್ಲ, ಅಲ್ಲಿ ಸಣ್ಣವರು ಮುನಿಸಿಕೊಂಡರೆ ದೊಡ್ಡವರು ತೆಕ್ಕೆಗೆ ಬಾಚಿಕೊಳ್ಳುತ್ತಿದ್ದರು.ದೊಡ್ಡವರು ಮುನಿದರೆ ಸಣ್ಣವರು ಕಾಲಿಡಿದುಕೊಳ್ಳುತ್ತಿದ್ದರು. ಹೀಗಿದ್ದಾಗ ಎಂಥಹ ಬಿರುಕುಗಳಿದ್ದರೂ ಸಂಬಂಧಗಳು ಗಟ್ಟಿ ನಿಲ್ಲುತ್ತಿದ್ದವು, ‘ಇಗೋ‘ ಎಂಬುದು ಇಂದಿನ ಗಂಡ-ಹೆಂಡತಿಯಲ್ಲಿ ಮನೆಯ ಯಜಮಾನನ ಸ್ಥಾನದಲ್ಲಿರುವ ನಿಮಿತ್ತ; ಅಲ್ಲಿ ಯಾರಿಗೂ ಪ್ರವೇಶ ಇರುವುದಿಲ್ಲ.ತಾವಾಯಿತು,ತಮ್ಮ ಮಕ್ಕಳಾಯಿತು.ಮಕ್ಕಳ ಸ್ಕೂಲ್,ಆಪೀಸ್, ಗಾಡಿ ಪೆಟ್ರೋಲ್ ಗೆ,ಹಾಲಿಗೆ ಗ್ಯಾಸ್ ಗೆ ಒಂದಷ್ಟು ಚೀಟಿಗೆ ಅಂತ ಬಂದ ಸಂಬಳ ಡಿವೈಡ್ ಮಾಡಿ,ಹೆಂಡತಿಗೆ ಒಂದಷ್ಟು ಸುಳ್ಳು ಖರ್ಚು ಗಂಡ ತೋರಿಸಿ,ಗಂಡನಿಗೂ ಹೆಂಡತಿ ಒಂದಷ್ಟು ಸುಳ್ಳು ಲೆಖ್ಖ ತೋರಿಸಿ,ಒಬ್ಬರಿಗೊಬ್ಬರು ಆದಶ೯ ದಂಪತಿಗಳಂತೆ, ತೊರೆದ ಸಂಬಂಧಗಳಿಗೆ ತೋರಿಕೆಯ ಮುಖವಾಡ ಧರಿಸಿ ಬದುಕುವವರಿಗೆ ನಿಜವಾದ ನೆಮ್ಮದಿ ಯಲ್ಲಿಯದು..? ಹಾಗಾಗಿ ವಿದ್ಯಾವಂತ..ಹಾಗೂ ನೌಕರಸ್ಥರ ಕುಟುಂಬಗಳಲ್ಲೇ ಈ ದಿನಗಳಲ್ಲಿ ಹೆಚ್ಚಾಗಿ ವಿಚ್ಛೇದನಗಳು ಜಾಸ್ತಿಯಾಗುತ್ತಿವೆ.
ಅಯ್ಯೋ..ಇಷ್ಟೊತ್ತು ಕಾಲು ಮಡಚಿ ಕುಳಿತಲ್ಲೇ ಹಿಂದಿನವರ ಹಾಗೂ ಇಂದಿನವರ ಕುರಿತು ಯೋಚಿಸಿದೆನೆಲ್ಲಾ..ಎಂದು ಎಲ್ಲಾ ತೊಳೆದುಕೊಂಡು ಮನೆಗೆ ಬಂದೆ. “ರೀ..ಯಾಕೋ ಮಾವ ಮೂರು ಸಾರಿ ಫೋನ್ ಮಾಡಿದ್ರು,ಇಷ್ಟೊತ್ತು ಎಲ್ಲಿ ಹೋಗಿದ್ರಿ,ಮೊಬೈಲ್ ಮನೇಲಿಟ್ಟು.” ಎಂದು ಗೊಣಗುತ್ತಾ..ಮೊಬೈಲ್,ಕಾಫಿ ನನ್ನ ಕೈಗಿಟ್ಟು ಹೋದಳು ನನ್ನ ಅಧಾ೯ಂಗಿ.ಮೂರು ಬಾರಿ ಪೋನ್ ಮಾಡಿದ್ದ ಮಹಾಶಯನಿಗೆ ನಾನು ಹಿಂದಿರುಗಿ ಕರೆ ಮಾಡಿದೆ. ಎನೋ ಪೋನ್ ಮಾಡಿದ್ದಂತೆ? ಏನ್ ಸಮಾಚಾರ! ಅಂದೆ.”ಅದೇ ಕಣೋ..ರಾತ್ರಿ ಪೋನ್ ಮಾಡಿದ್ದೆನಲ್ಲ? ಡೈವೋರ್ಸ್ ಕೊಡಿಸೋದರ ಬಗ್ಗೆ, ಪ್ಲೀಜ್ ನನಗೆ ನೆಮ್ಮದಿ ಬೇಕು ಏನ್ ಮಾಡ್ಲಿ..”? ಅಂದ. ನನಗಿಂತ ದೊಡ್ಡವನು,ಹೆಚ್ಚಿಗೆ ಓದಿ ನೌಕರಿ ಪಡೆದು,ಪಟ್ಟಣ ಸೇರಿ,ಇಷ್ಟ ಪಟ್ಟು ಮದುವೆ ಆಗಿ…ಈಗ ಏನ್ ಮಾಡ್ಲಿ..ಅಂತ ಕೇಳುವವನಿಗೆ ಏನ್ ಹೇಳಲಿ..? “ಸಹೋದರ ನಿನಗೆ ನನ್ನ ಮನೆ ಬಾಗಿಲು ಯಾವಾಗಲೂ ತೆಗೆದಿರುತ್ತೆ ಊರಿಗೆ ಬಾ..ಎಲ್ಲಾ ಸಂಬಂಧಗಳನ್ನ ಪುನಃ ಬೆಸೆಯೋಣ” ಎಂದು ಫೋನಿಟ್ಟು, ಒದ್ದೆಯಾದ ಕಣ್ಣೊರಸಿಕೊಳ್ಳುತ್ತಿದ್ದೆ “ರೀಯಾರದು ಪೋನ್..? ಯಾಕ್ ಕಣ್ಣೀರು..!” ಅಂತ ಕೇಳಿದ ನನ್ನವಳನ್ನ ನೋಡುತ್ತಾ..ನಿಂತು ಬಿಟ್ಟೆ..!

—–ನಾಗು,ತಳವಾರ್.





21 12 2013

ನಾನೀಗ ಬಂಧಿ..!
………………………

ಸೂರ್ಯನಿಗೆ ಜಗ ಬೆಳುಗುವ
ಹುಚ್ಚೇ ನಿಲ್ಲಲ್ಲೊಲ್ಲದು.
ಅವನುಗುಳಿದ ಉಗುಳ
ಒರೆಸಿಕೊಳ್ಳುತ್ತಲೇ,ಈ ಜನರ ಜಗತ್ತು
ಜಾತ್ರೆಯಂತೆ ಸಾಗುತ್ತಿದೆ.

ನಾವು ಬಾಯಿಂದ ತಿಂದದ್ದು
ಪಚನವಾಗಿ ಹಿಂದಿಂದ ಹೋಗಿ
ಹಂದಿಗೆ ಅನ್ನವಾಗುತ್ತಲೇ ಇದೆ.

ಇವನ್ಯಾರೋ..ಇಲ್ಲಿ ಬನ್ನಿ ಮರದಲ್ಲಿದ್ದ
ಶಸ್ತ್ರಾಸ್ತ್ರಗಳನ್ನೆಲ್ಲಾ ಮಿನಾರ ತುದಿಗೆ ಹೊತ್ತೊಯ್ದು
ಹುಟ್ಟಿದ ಮಕ್ಕಳಿಗೆ ಅಪ್ಪನಾಗಲು ಬಯಸುತ್ತಾನೆ.

ನನ್ನ ತುಫಾಕಿಯ ಕೊಳವಿಯೊಳಗೆ
ಗುಂಗಾಡಿ ಗೂಡು ಕಟ್ಟಿದೆ,ಯುದ್ಧ ಬೇಡವೆಂದರೂ..
ಅವ್ವಳ ಹಾಲಿಲ್ಲದ ತೊಗಲ ಚೀಲಕೆ ಕೈ ಹಾಕಿದವನ
ಏನ ಮಾಡಲಿ…?

ನನ್ನ ಉಡುದಾರದಿಂದ ಅವನ ಕೈ ಕಟ್ಟಿ,
ಜನಿವಾರದಿಂದ ಉರುಳೆಳೆದು,ಕೆಂಪು ವಸ್ತ್ರದಲಿ ಸುತ್ತಿಟ್ಟದ್ದಕ್ಕೆ
ನಾನೀಗ ಕೊಳತೊಡಿಸಿಕೊಂಡ ಬಂಧಿ….!

                          ನಾಗು,ತಳವಾರ್.





21 12 2013

ರಾಜ್ಯ ಭಾರ…!
……………………..

ನನ್ನ ಹುಟ್ಟಿಗೆ ಬೆತ್ತಲೆಯೇ
ಕಾರಣ ಎಂಬುದಾದರೆ,
ನನ್ನೊಳಗೆ ಮಹಾವೀರನ ಬದಲಿಗೆ
ಬುದ್ಧ ಬಂದದ್ದೇಕೋ..ತಿಳಿಯುತ್ತಿಲ್ಲ.

ಕೃಷ್ಣ ಕೊಟ್ಟ ಸವೆಯದ
ಸೀರೆಯನ್ನ ದ್ರೌಪದಿ
ಕಳೆದುಕೊಂಡಿದ್ದಾಳಂತೆ..
ಪಾಪ ನಾರಿಯರೆಲ್ಲಾ ಅಲ್ಲಲ್ಲಿ ಬಿಕನಿತೊಟ್ಟು
ಅಲೆಯುವಂತಾಗಿದೆ…!

ಪಾಂಡವರಿಗೆ ಮತ್ತೆ ವಾನವಾಸವೇನೋ..?
ಅವರೆಲ್ಲಾ ಬೀದಿ,ಬೀದಿಯಲ್ಲಿ ವೇಷ ತೊಟ್ಟು;
ಭಿಕ್ಷೆಗಿಳಿದಿದ್ದಾರೆ.ಈಗ ಧುರ್ಯೋಧನ,ಕೀಚಕ,
ಶಕುನಿಂಥವರದ್ದೇ ರಾಜ್ಯ ಭಾರ…!

                    ನಾಗು,ತಳವಾರ್.





18 12 2013

ಸಿಪ್ಪೆ ಸುಲಿಯದ ಕಡಲೆ…!
……………………….

ಸೋತವನಿಗೆ ಸತ್ತವನ ಕತೆ ಹೇಳಿ
ಸತ್ಯ ಮುಚ್ಚಿಡುವುದು
ಬಲೂನಿನ ಮುಕುಳಿ ಜಗ್ಗಿ..
ಗಾಳಿ ತುಂಬಿ ಕೈ ಬಿಟ್ಟಂತಲ್ಲ..!

ಹಗಲ ದುಡಿಮೆಗೆ,
ಇಲ್ಲಿ ಬೆವರಿಗೂ ಬರ.
ಹುಟ್ಟಿದ ಮಗುವ ಹೋಲಿಕೆ ನೋಡಿ
ಸಂಬಂಧ ಕಟ್ಟುವವರಿಗೂ..
ನೀಡಬೇಕಿದೆ ಮುಗುಳ್ನಗೆ.

ಯಾರೋ ಕಟ್ಟಿದ ಸಪ್ಪಿನ
ಸಿವುಡಿಗೆ ನನ್ನ ಮನೆಯೊಳಗೆ
ಘಮ್ಮನೆಯ ಒಗ್ಗರಣೆ,
ಬದುಕು ಸಿಪ್ಪೆಸುಲಿಯದ ಕಡಲೆ..!

ಹಣ್ಣಾಗಲು ಒತ್ತೆ ಇಟ್ಟು ಮರೆತ ಮಾವು;
ಮತ್ತೆಲ್ಲೋ ಮರವಾಯಿತಂತೆ,
ನೆರೆಳಿಗೆ ಮಲಗಿ ಬಂದವನು
ಮತ್ತೆ ಮತ್ತೆ ಒತ್ತಿ ಹೇಳುತಿದ್ದಾನೆ.

ಹರಿದ ಅಂಗಿ ಹುಡುಕುತ್ತಿದ್ದೇನೆ,
ರಂಗಿನೋಕುಳಿಗೆ,ಗಂಟು ಸಿಗುತ್ತಿಲ್ಲ.
ಆಕೆ ಬರುವ ಹೊತ್ತಾಯಿತು,
ಮರೆತರೆ ಮೈಯಲ್ಲಾ ಬಣ್ಣ..!

ನಾಗು,ತಳವಾರ್.





5 12 2013

ತೊಲೆ ಇಲ್ಲದ ಮನೆಯ ವಾಸ
…………………………………

ನಿಜ.ಪ್ರೀತಿ ಯಾಕೋ..
ಬೆಚ್ಚಗಿರಬಹುದೆಂದು ಬರೀ
ಮಹಡಿ..ಮಹಡಿಯನ್ನೇ ಬಯಸಿ
ಬಡಿವಾರದ ಸುತ್ತಲೇ ಬಸ್ಕಿ ಹೊಡೆಯುತ್ತಿದೆ.

ಜೀವಕ್ಕೆ ಪರಿವೇ ಇಲ್ಲ.
ಅದೊಂದು
ಭ್ರೂಣವಾಗದ
ವೀರ್ಯವಷ್ಟೇ..!

ಮೌಲ್ಯಗಳನ್ನೆಲ್ಲಾ ಮಾರಟಕ್ಕಿಟ್ಟು
ಮಾಂಗಲ್ಯ ಸರ ಮಾಡಿಸಿ
ಅವಳ ಬಸಿರ ಕಾದವನಿಗೆ
ಉಸಿರೇ ಇಲ್ಲದ ಪಿಂಡ ಈ ಧರೆಗೆ..!

ತಥ್..ತೊಡೆಯ ನರ ಕಿತ್ತು
ಉರುಳಾಕಿಕೊಳ್ಳಲೂ ತೊಲೆ ಇಲ್ಲದ
ಮನೆಯ ವಾಸ.

ಬಿಡು ಶುಗರ್,ಬಿಪಿ ಗ್ಯಾಸ್ಟ್ರಿಕ್.ಲಕ್ವಗಳೆಲ್ಲಾ
ಬಾಣಗಳಾಗಿ ದೇಹಹೊಕ್ಕು
ನಿನ್ನ ಭೀಷ್ಮನಂತೆ ಹಾಸಿಗೆಗೆ ಮಲಗಿಸಿತ್ತವೆ.
ಸುಮ್ಮನೇ ಮಲಗಿ,ಕ್ರೌರ್ಯ-ಹಟ್ಟಹಾಸವ ಕೇಳಿಸಿಕೋ..
ಅಂತ್ಯವಾಗುವವರೆಗೂ..ದಿಗಂತ ನೋಡುತ..!

ನಾಗು,ತಳವಾರ್.





4 12 2013

ಎಲ್ಲಿ ಲಭ್ಯ..?
————-

ಅಂಗಳದ ಮೂಲೆಯಲಿ
ಮೂರು ಕಲ್ಲನಿಟ್ಟು,ಮಾಡುತ್ತಿದ್ದ ಅವ್ವಳ ಕೋಳಿ ಸಾರು.!

ನೆರಿಕೆಯ ಸಂದಿಯಿಂದ
ಒಂದಷ್ಟು ಕೂದಲು ಕೊಟ್ಟರೆ..
ಗೂಟಕ್ಕೆ ಸುತ್ತಿ ಮಾರುತ್ತಿದ್ದ ಮಿಠಾಯಿ

ತಾಳಿಗರಿಯಲ್ಲಿ ಕಡ್ಡಿ ಚುಚ್ಚಿ
ಭವಿಷ್ಯ ಹೇಳುತ್ತಿದ್ದ ಕುಂಡು ರಾಮುಡು,

ಗುಡಿಯ ಅಂಗಳಕೆ
ಗೋಣೀ ಚೀಲ ಹಾಕಿ
ಧುಪ್ಪನೆ ಹೋರಿ ಬೀಳುಸುತ್ತಿದ್ದ
ಲಾಲು ಕಟ್ಟೋ ಸಾಬು.

ಊರ ಗೌಡರ ಬಿಳೀ ಮನೆಯ
ಗೋಡೆಗೆ ತೋರಿಸುತ್ತಿದ್ದ
ಮೂಕ ಸಿನಿಮಾ,

ಮಣ್ಣು ಹಾಕಿ..ಚಡ್ಡಿ ಹರಿಯುವಂತೆ
ಆಡಿದ ಜಾರಿಕಿ ಬಂಡಿ,ಲಗೋರಿ,ಚಿಣ್ಣಿ ದಾಂಡು,
ಬುಗುರಿ.ಗೋಲಿ,ಸಿಗರೇಟಿನ ಚಾಫ..

ಸಣ್ಣಪ್ಪ ಮಾಡಿದ ಬಯಲಾಟದ ಸಂಗ್ಯಾನ ಪಾತ್ರ,
ಉಗಾದಿಗೆ ಹನುಮಪ್ಪನ ಹೊಕ್ಕಳ ಗುಂಡಿಗೆ ಹಾರಿ
ಹರಿದ ಕಾಯಿ.

ಕೊನೆ..ಕೊನೆಗೆ ಗೌರಿ ಹಬ್ಬದ
ಆಕೆಯ ಆರತಿ ತಟ್ಟೆಗೆ; ಕಟ್ಟೆಯ ಮೇಲೇ ಕಾದು ಕುಳಿತ ಘಳಿಗೆ,

ಇವಿಷ್ಟೂ… ದುಬಾರಿಯ ಈ..
ಮೈಕ್ರೊ ಸಿಮ್ಮಿನ ಎನ್ರಾರ್ಡ್ ಸ್ಮಾರ್ಟ್ ಪೋನ್ ನಲ್ಲಿ
ಮರುಕಳಿಸಿ ಕೊಡುವ ಸಾಪ್ಟ್ವೇರ್ ಲಭ್ಯವಿದೆಯಾ..?

ನಾಗು,ತಳವಾರ್.

 





ಇಲ್ಲಿ ಹರಿದ ಅಂಗಿಯ ಬಗ್ಗೆ ಆಡಿಕೊಳ್ಳುವುದಿಲ್ಲ….!

2 10 2010

          ಎಲ್ಲಿದ್ದಿಯಾ..? ಹೀಗೆ ನಿನ್ನ ನೋವಿಗೆ ನಲಿವಿಗೆ ನಾನಿದ್ದೇನೆ ಕಣೋ..ಎಂದು ಅವತ್ತು ಇಳಿ ಸಂಜೆಯಹೊತ್ತಲ್ಲಿ ನಿನ್ನ ಮುಂಗುರುಳ ಸರಿಸುತ್ತ ಕಣ್ಣ ಕೊನೆಯಲ್ಲೇ ಭಾಷೆ ನೀಡಿ,ಅದೆಲ್ಲಿ ಕಾಣೆಯಾದೆ..?ಗೊತ್ತಿಲ್ಲದ ಊರಿನ ಆ ರೈಲು ನಿಲ್ದಾಣದ ಮುಂಬಾಗಿಲ ಬಳಿ ನಿಂತು ನನ್ನ ಸ್ವಾಗತಿಸಿದ್ದೆಯಲ್ಲ..? ನಿನ್ನೆ ನಾನು ಆ ಜಾಗದಲ್ಲಿ ಅದೆಷ್ಟೋ ಹೊತ್ತು ಸುಮ್ಮನೇ ನಿಂತು ಬಂದೆ ಗೊತ್ತಾ..? ಅದೇನೋ ನಿನ್ನ ನೆನಪು ಎದೆಯ ಮಿದುವಿಗೆ ಮೃದುವಾಗಿ ಹಿತವಾದ ಯಾತನೆ ನೀಡುತ್ತಿದೆ.ನನ್ನ ಪಾಲಿಗೆ ಬದುಕೇ ಮುಗಿದಿತ್ತು.ನನ್ನ ಊರು,ಜನ,ಮನೆಯೆ ಮಂದಿ ಎಲ್ಲರೂ ನಿಕೃಷ್ಟವಾಗಿ ಕಾಣುತ್ತಿದ್ದ ಘಳಿಗೆಯಲ್ಲಿ; ನಾನು ಸಮಾಧಿ ಸೇರುವ ಸಂದಭ೯ದಲ್ಲಿದ್ದೆ,ಅದ್ಯಾವ ಮಾಯವೋ..! ನಿನ್ನ ದೂರವಾಣಿ ಕರೆ, ಆ ಘಳಿಗೆಯಲ್ಲಿ ನನ್ನ ಸಾವನ್ನ ಮರೆಸಿತ್ತು.”ಬಂದು ಬಿಡು ಮಿತ್ರಾ..ನಮ್ಮೂರಿಗೆ,ಬೆಂಗಳೂರೆಂಬುದು ನಿನ್ನಂಥ ನೊಂದವರಿಗೆ, ಹತಾಶರಿಗೆ, ಅವಮಾನಿತರಿಗೆ ನೆಮ್ಮದಿಯ ತಾಣ.ಇಲ್ಲಿ ನಿನ್ನಿಷ್ಟದ ಹಾಗೆ ಬದುಕಬಹುದು. ನಿನ್ನ ಪ್ರತಿ ಚಲನ ಗಮನಿಸಿ ಚಾಡಿ ಹೇಳುವರಿರುವುದಿಲ್ಲ.ನಿನ್ನ ಹರಿದ ಅಂಗಿಯ ಬಗ್ಗೆ ಆಡಿಕೊಳ್ಳುವುದಿಲ್ಲ. ನಿನ್ನ ಜೊತೆಗಿದ್ದ ಹುಡುಗಿ ಯಾರೆಂದು ಯಾರೂ ಪ್ರೆಶ್ನೆಸಿವುದಿಲ್ಲ.ಉಂಡೆಯಾ..ಮತ್ತೇನಾದರೂ ಕಂಡೆಯಾ..? ಹು..ಹುಂ..! ಯಾರೂ ಏನೂ ಕೇಳುವುದಿಲ್ಲ.ಇಲ್ಲಿ ಒಬ್ಬಿಬ್ಬರು ಬಲ್ಲವಿರಿದ್ದರೆ ಬೆಂಗಳೂರೆಂಬದು ಬೆಲ್ಲಂದಂಥದ್ದು ಮಹರಾಯ..ಬಂದು ಬಿಡು.” ಎಂದೆಯಲ್ಲಾ..! ನಿನ್ನ ಆ ನಿಷ್ಕಲ್ಮಷ ಮಾತೇ ನನ್ನ ನಿನ್ನೂರಿಗೆ ಬರುವಂತೆ ಮಾಡಿದ್ದು ಮತ್ತು ಹಿಡಿ ಅನ್ನ ನೀಡಿದ್ದು.ನಿನ್ನ ಹಾಗೂ ನಿನ್ನ ಬೆಂಗಳೂರನ್ನ ನಾ ಹೇಗೆ ಮರೆಯಲಿ ಗೆಳತಿ..? ಭಾವುಕರಿಲ್ಲದ ಯಾಂತ್ರಿಕ ನಗರ ಎಂದುಕೊಂದಿದ್ದೆ;ನನ್ನ ಹೂಯೆ ತಪ್ಪಾಯಿತು, ಇಲ್ಲಿ ಎಲ್ಲಾ ಇದೆ.ಅದು ನೋಡುವ ಕಣ್ಣಲ್ಲಿ ಮತ್ತು ಬದುಕುವ ಕ್ರಿಯೆಯಲ್ಲಿ ಅಡಗಿದೆ ಎಂಬುದಂತೂ ಸುಳ್ಳಲ್ಲ.ಅದೆಲ್ಲಾ ಸರಿ ಉಳಿಯಲು ನಿನಗೆ ಗೊತ್ತಿದ್ದ ಹುಡುಗನೊಬ್ಬನ ಸೂರಿಗೆ ಬಿಟ್ಟೆ.ಮಾಡಲು ಅದ್ಯಾರನ್ನೋ ಕೈ ಹಿಡಿದು ಕೆಲಸ ಗಿಟ್ಟಿಸಿ ಕೊಟ್ಟೆ.ಬಿಡುವಿದ್ದಾಗೆಲ್ಲಾ ಜೊತೆಗಿದ್ದು ನಿನ್ನೂರಿನ ನ್ಯೂನ್ನತೆ..ಪ್ರೆತಿಷ್ಠೆ..ಗತ್ತು,ದೌಲತ್ತು..ಪ್ರೀತಿ ಎಲ್ಲವನ್ನೂ ಪರಿಚಯಿಸಿದೆ.ಆದರೆ ಈಗ ಅದೆಲ್ಲಿ ಹೋದೆ ಗೆಳತಿ..? ಕಷ್ಟದಲ್ಲಿದ್ದಾಗ ಕಣ್ಣೀರ ಒರೆಸಿ,ಸಂತಸದ ಮಗ್ಗುಲಿಗೆ ಬದಲಿಸಿ, ಹೀಗೇ ಸುಖಾ ಸುಮ್ಮನೆ ಗೆದ್ದು ನಿಲ್ಲುವ ಹೊತ್ತಲ್ಲಿ ಎದ್ದು ಹೋದರೆ ಏನನ್ನಲಿ..? ನನಗೆ ನಿನ್ನ ಗುರಿ,ಬದುಕುವ ಪರಿ ಅಷ್ಟಾಗಿ ಗೊತ್ತಿಲ್ಲ ನಿಜ, ಆದರೆ ನಿನ್ನೊಳಗಿನ ಕಾಳಜಿ,ಜೀವನ್ ಪ್ರೀತಿ ಅದಿನ್ನೆಂಥಹದ್ದು ಎಂಬುದು ಖಂಡಿತಾ ಗೊತ್ತಿದೆ. ಅದ್ಯಾರನ್ನೋ..ಪ್ರೀತಿಸುತ್ತೇನೆ,ಪ್ರೀತಿಸುತ್ತೇನೆ ಅನ್ನುತ್ತಲೇ ಅವನ್ಯಾರೆಂದೂ ಹೇಳಲಿಲ್ಲ.ಬಿಡು,ಗೆಳೆಯನನ್ನೇ ಇಷ್ಟೊಂದು ಪ್ರೀತಿಸುವುವಳು;ಪ್ರಿಯಕರನಿಗಿಗೆ ಅದಿನ್ಯಂಥಹ ಪ್ರೀತಿ ಕೊಡುತ್ತೀಯೆಂದು ನಾನು ಊಹಿಸಬಲ್ಲೆ.ಪ್ರಾಯಶಃ ನೀನೀಗ ಅವನ ಹುಡುಕಾಟದಲ್ಲೋ..ಅಥವ ಅವನ ಸನಿಹದಲ್ಲೋ..ಈ ಗೆಳೆಯನಿಂದ ದೂರವಿರುವಿಯಾದರೆ, ನಿಜಕ್ಕೂ ನನಗೆ ಸಂತಸವೇ…! ನಾನೀಗ ನನ್ನ ಊರಿಗೆ ಹೊರಡಲಿದ್ದೇನೆ ಹೋಗುವ ಮುನ್ನ ನಿನ್ನ ಕಣ್ತುಂಬ ನೋಡಬೇಕೆನ್ನುವ ತುಡಿತ.ಸಾಧ್ಯವಾದರೆ ನಾಳೆ ಸಂಜೆ ಬರಮಾಡಿಕೊಂಡ ನಿಲ್ದಾಣಕ್ಕೆ; ನನ್ನ ಬೀಳ್ಕೊಡಲು ಖಂದಿತಾ ಬರುತ್ತಿ ತಾನೇ,,? ನಾಳೆಯ ಒಳಗೆ ನಾನು ಹೋಗುತ್ತಿರುವುದು ನಿನಗೆ ತಿಳಿಯದಿದ್ದರೆ; ನನ್ನೂರಿಗೆ ನಿನ್ನ ಲಗ್ನ ಪತ್ರಿಕೆ ಕಳಿಸುವುದ ಮರಿಬೇಡ.ಮದುವೆಯ ಮಂಟಪದಲ್ಲಿ ನಿನ್ನ ಅವನನ್ನ ಕಣ್ತುಂಬ ನೋಡಿ ಖುಷಿ ಪಡುತ್ತೇನೆ.
ಎಲ್ಲಿದ್ದರೂ ನಿನ್ನ ಬದುಕು ಬಂಗಾರವಾಗಲಿ ಗೆಳತಿ.
                                           -ವಂದನೆಗಳೊಂದಿಗೆ ನಿನ್ನ ಗೆಳೆಯ……………………………!





ಮದುವೆಗೆ ಮುಂಚೆ ಹಡೆದುಕೊಂಡ ಮಗುವನ್ನು ಯಾವ ಹೆಣ್ಣು ತಾನೇ ನನ್ನ ಮಗುವೆಂದು ಮುದ್ದಿಸಿಯಾಳು..?

30 05 2009

 4856211[1]

     ಹುಡುಗೀ, ಅವತ್ತು ಪೂರ್ವಾಹ್ನ ನಿಮ್ಮೂರಿನ ಊರ ಹೊರಗಿನ ದೇವರ ಜಗುಲಿಯ ಮೇಲೆ ಹಾಗೇ ಒಬ್ಬರಿಗೊಬ್ಬರು ಏನೊಂದೂ ಮಾತಾಡಿಕೊಳ್ಳದೇ; ಇಡೀ ಬದುಕೇ ಮುಗಿದು ಹೋದವರಂತೆ ಕುಳಿತಿದ್ದೆವಲ್ಲ? ಇವತ್ತು ಆ ಗುಡಿಯನ್ನೇ ಸೇವಾ ಸಮಿತಿಯವರು ನೆಲಸಮ ಮಾಡಿದ್ದಾರೆ. ಅದೇನೋ ಜೀರ್ಣೋದ್ಧಾರ ಹಣ ಸಂಗ್ರಹಿಸಿ ಇಡೀ ದೇಗುಲವನ್ನೇ ಹೊಸದಾಗಿ ನಿರ್ಮಿಸುವ ಯೋಜನೆಯಂತೆ ಅವರದ್ದು. ಎಂದೂ ಯಾರೊಂದಿಗೂ ಮಾತನಾಡದ ಆ ಕಲ್ಲು ದೇವರ ಮೇಲಿರುವ ನಂಬಿಕೆಯಲ್ಲಿ ಜೀವ ಇರುವ ನಮ್ಮಂತಹ ಎಳೆ ಹೃದಯಗಳ ಬಗ್ಗೆ ಕೊಂಚ ಹಿಡಿ ಮಮಕಾರ ಬೆಳಸಿಕೊಳ್ಳಲಾರದ ಸಮೂಹದ ಬಗ್ಗೆ ನನಗೆ ಅಯ್ಯೋ ಅನಿಸುತ್ತಿದೆ. ಮುರಿದ ಮನೆ- ಮಂದಿರಗಳನ್ನೆಲ್ಲಾ ಹೇಗೋ ಪುನಃ ಸರಿಪಡಿಸಿಕೊಳ್ಳಬಹುದು, ಆದರೆ ಸಂಪ್ರದಾಯ-ಆಚರಣೆ ಆಡಂಬರದಲ್ಲಿ ಎರಡು ಹೃದಯಗಳನ್ನು ಬೇರ್ಪಡಿಸಿ ಛಿದ್ರ ಛಿದ್ರಗೊಳಿಸಿತಲ್ಲ ಈ  ನಮ್ಮ ಜಾತಿ, ಸಮಾಜ;  ಇದನ್ನೆಲ್ಲಾ ಪುನಃ ಹೊಂದುಗೂಡಿಸಿ ಆ ಚೈತನ್ಯ, ಆ ದಿವ್ಯ ಸಂತಸವನ್ನ ಮತ್ತು   ಮರೆಯಲಾರದ ಆ ಕ್ಷಣಗಳನ್ನ ನಮ್ಮ ಬೊಗಸೆಗೆ  ತಂದಿಟ್ಟೀತೇ ಈ ನಮ್ಮ ಗೊಡ್ಡು ಸಂಪ್ರದಾಯದ ಸಮಾಜ….?  
             ದಿನಗಳು ಅದೆಷ್ಟು ಬೇಗ ಉರುಳಿಹೋಗುತ್ತವೆಲ್ಲವೇ?  ನಾನು ನೀನು ಕೈ -ಕೈ ಹಿಡಿದುಕೊಂಡು  ಅದೆಂದೂ ಹೋಗದ ರಸ್ತೆಯಲ್ಲಿ ಸುಮ್ಮನೇ ಈಡೇರದ ಭವಿಷ್ಯತ್ತಿನ ಕನಸು ಕಾಣುತ್ತಾ, ಕಂಡ ಕನಸಿನ ಬಗ್ಗೆ ದೂರವಾಣಿಯಲ್ಲೇ ಸಾಧ್ಯ ಅಸಾಧ್ಯಯಗಳ ಬಗ್ಗೆ ವಿಶ್ಲೇಷಿಸಿ ಕೊಳ್ಳುತ್ತಾ! ಪುಟಗಟ್ಟಲೆ ಪ್ರೇಮ ಕಾವ್ಯದ ಪತ್ರ ವಿನಿಮಯ ಮಾಡಿಕೊಂಡ ಆ ದಿನಗಳು ಮೊನ್ನೆ- ಮೊನ್ನೆ ತಾನೇ ಜರುಗಿವೇನೋ ಅನಿಸುತ್ತಲಿವೆ ಅಲ್ಲವೇ……?
ನಿನು ಹೋದಾಗಿನಿಂದ ಬದುಕು ನಿಜಕ್ಕೂ ನಿಂತಲ್ಲೇ ನಿಂತಿದೆ. ಆದರೆ ನಿನ್ನ ಬದುಕಿನಲ್ಲಾದ ತಿರುವುಗಳಿಂದ ನಾನಿನ್ನು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಮನೆಯವರ ಒಕ್ಕೊರಲಿನ ಆರ್ತನಾದಕ್ಕೆ; ಒಲವ ತೊರೆದು  ಮತ್ತೊಬ್ಬನೊಂದಿಗೆ ತಾಳಿ ಕಟ್ಟಿಸಿಕೊಂಡ ನಿಸ್ಸಹಾಯಕ ಹೆಣ್ಣೇ….! ನಿನ್ನಂಥವಳು ಈ ಧರೆಗೆ ಮೊದಲೇನಲ್ಲ ಬಿಡು, ಅದೆಷ್ಟೋ ಹೆಣ್ಣುಗಳು ಒಲ್ಲದ ಗಂಡಸಿನೆದುರು ಕಣ್ಣೀರಿನಲ್ಲೇ ತಾಳಿ ಕಟ್ಟಿಸಿಕೊಳ್ಳುತ್ತಿದ್ದರೂ ಆಕೆಯ ಹಿಂದಿರುವ ಸಖಿಯರು “ತವರು ಮನೆಯನ್ನ ಮರೆಯ ಬೇಕೆಂದು ಈಗಲೇ ಕಣ್ಣೀರಿಟ್ಟ್ರೆ ಹೇಗೆ?” ಎಂದು ತಿಳಿಯಾದ ಲೇಪನ ಹಚ್ಚಿ ಆಕೆಗೆ ಇನ್ನಷ್ಟು ಅಳಲು ಸ್ವತಂತ್ರ ಕೊಡುತ್ತಾರೆ.
ಇಂತಹ ಸ್ಥಿತಿಯಲ್ಲೇ ನೀನು ಆತನ ಮನೆಯನ್ನು ಸೆರಿದೆಯೆಂದು ಕೇಳಲ್ಪಟ್ಟೆನಾದರೂ, ಅಂಗಳದಲ್ಲಿ ಆಟಕ್ಕೆ ಬಿಟ್ಟ ಮಗು ತಕ್ಷಣ ಕಣ್ಮರೆಯಾದಾಗ ಆಗುವ ತಾಯಿಯ ಆತಂಕ ನಿನ್ನದಾಗುತ್ತದೆಂದು ಭಾವಿಸಿದ್ದೆನಾದರೂ, ನಂತರ ತಿಳಿದಿತ್ತು; ಮದುವೆಗೆ ಮುಂಚೆ ಹಡೆದುಕೊಂಡ ಮಗುವನ್ನು ಯಾವ ಹೆಣ್ಣು ತಾನೇ ನನ್ನ ಮಗುವೆಂದು ಮುದ್ದಿಸಿಯಾಳು? ಆತ್ಮಗೌರವಕ್ಕಾಗಿ ತಿಪ್ಪೆಗೆ ಬಿಸಾಕಿದ ಮಗುವಿನ ಸ್ತಿತಿ ನನ್ನ್ನದಾಗಿತ್ತೆಂದು ನಂತರ ನನಗೆ ಗೊತ್ತಾಗಿತ್ತು. ಹಾಗೆ ಬಿದ್ದ ಮಗುವನ್ನು ಮತ್ತ್ಯಾರೊ ಹೊತ್ತೊಯ್ದು ಮುದ್ದಿನಿಂದ  ಸಾಕಿ ಸಲುಹಿದಂತೆ: ನಿನ್ನ ನೆನಪಲ್ಲೇ ಬದುಕಿದ್ದ ನನ್ನನ್ನು ಪುನಃ ವಾಸ್ತವ ಪ್ರಪಂಚಕ್ಕೆ ತಂದು- ಮೋಸದ ನಂತರವೂ ಬದುಕುವ ಮೋದವನ್ನ ಕಲಿಸಿಕೊಟ್ಟ ತಾಯಿ ಹೃದಯದ ಗೆಳತಿಯೊಬ್ಬಳ ಮಡಿಲೊಂದು ನನಗೆ ದೊರೆಯಿತು. ನಿಜಕ್ಕೂ “ಮುಂದಿನ ಜನ್ಮವೊಂದಿದ್ದರೆ ನಿನ್ನ ಮಗುವಾಗಿ ಹುಟ್ಟಿ ನಿನ್ನ ಋಣ ತೀರಿಸುತ್ತೇನೆ”  ಎಂದು ಆ ಗೆಳತಿಯ ತಂಪನೆಯ ಹಸ್ತದ ಮೇಲೆ ಪ್ರಮಾಣ ಮಾಡಿ ಎದ್ದು ಬಂದು ಮತ್ತೆ ನನ್ನ ಸಮೂಹದಲ್ಲೇ ಬೆರೆತುಕೊಂಡೆ.
       ಅಂದ ಹಾಗೆ ಮೊನ್ನೆ ಕಾರ್ತಿಕ ಮಾಸದ ಮೊದಲು ಅದೇ ಆಪ್ತ ಗೆಳತಿ ನನ್ನ ನೋಡಿಕೊಂಡು ಹೋಗಲು ಬಂದು; ನಿನ್ನ ಬಗ್ಗೆ, ನಿನ್ನ ಮಗುವಿನ ಬಗ್ಗೆ ಮಾತಡಿದಳು. ಅದೇನು ನೀನು ಮಗುವಿಗೆ ನನ್ನ ಹೆಸರನ್ನ ಇಟ್ಟಿರುವೆ ಎಂದು ಕೇಳಿ; ಹೆಣ್ಣಿನ ಅಂತರಾಳದ ನಿಜವಾದ ಅನ್ವೇಶಕ ಒಬ್ಬವನಾದರೂ ಇಲ್ಲಿ ಹುಟ್ಟಿ ಬಂದಿರಬಹುದೇ ಎಂದು ದಿಗ್ಮೂಢನಾಗಿ ಕುಳಿತುಬಿಟ್ಟೆ, ಅಲ್ಲದೇ ನಿನ್ನ ಗಂಡ ನಿಮ್ಮಿಬ್ಬರ ಸಂಸಾರದಿಂದ ಅರ್ಧಕ್ಕೆ ಎದ್ದು ಹೋದನೆಂದು ಕೇಳಲ್ಪಟ್ಟೆ ತುಂಬಾ ವ್ಯಥೆಯಾಯ್ತು ಹುಡುಗೀ, ನಿನ್ನ ಬದುಕು ನನ್ನ ಪಾಲಿಗೆ. ಮೊದಲೇ ನಾನು ಭಾವುಕ; ನಿನ್ನ ವಿಳಾಸವನ್ನ ಗೆಳತಿ ಕೊಡಲಿಲ್ಲ, ದೂರವಾಣಿ ಸಂಖ್ಯೆಯಂತೂ ಸಿಗಲೇ ಇಲ್ಲ. ಸಧ್ಯ ಈ ಪತ್ರವಾದರೂ ನಿನಗೆ ಸಿಗಬಹುದಾ…? ಗೊತ್ತಿಲ್ಲ.
ನನ್ನ ಮನಸಿನ ಸಮಾಧಾನಕ್ಕಾದರೂ ಈ ಪತ್ರ, ಹೇಗಾದರೂ ನಿನಗೆ ಸಿಗಲಿ ಎಂಬ ನಂಬಿಕೆಯೊಂದಿಗೆ,

              ಅದೇ ನಾನು….!





ನಾನು ಮತ್ತು ಅವಳು…!

28 03 2009

images3

ಐದು ವರ್ಷಗಳ ಹಿಂದೆ ಇದೇ ಬಸ್ ನಿಲ್ದಾಣದಲ್ಲಿ ಅವಳಿಗಿಗಾಗಿ, ಕೇವಲ ಅವಳ ಬರುವಿಕೆಗಾಗಿ ನಿರೀಕ್ಷಿಸುತ್ತಿದ್ದನಾನು; ಅವಳು ಬರುವವರೆಗೂ ಅಲ್ಲಿಯೇ ಕುಳಿತು ಭಿಕ್ಷೆ ಬೇಡುತಿದ್ದ ಮುದುಕಿಯ ಮುಖದ ಮೇಲಿನ ಸುಕ್ಕುಗಟ್ಟಿದ ರೇಖೆಯನ್ನೇ ನೋಡುತ್ತಾ ಕುಳಿತಿದ್ದೆ.ಅಡ್ಡಬಂದ ಬಟಾಣಿ ಮಾರುವ ಹುಡುಗ ಹಿಂದೆ ಹರಿದಿದ್ದ ಚಡ್ಡಿಯನ್ನು ಮೇಲೆಕ್ಕೇರಿಸಿಕೊಳ್ಳುತ್ತಾ “ಟೈಮೆಷ್ಟಾಗಿದೆಸಾರ್” ಎಂದಾಗಲೂ ಮೂಕವಿಸ್ಮಿತನಾಗಿ ನಿಂತಿದ್ದೆ. ಹಾಗೆ ನಿಂತಿದ್ದಾಗಲೇ ಇವನೆಲ್ಲೋ ಮಾತು ಬಾರದ ಮೂಕನಿರಬೇಕು ಎಂಬಂತೆ ನೋಡಿ ಹೊರಟು ಹೊದ.
ಆಗ ನಿಜಕ್ಕೂ ಮಾತೆಲ್ಲ ಸತ್ತಂತಾಗಿ ಮೌನವೊಂದೇ ತನ್ನ ಸಾಂಮ್ರಾಜ್ಯವಾಳುತ್ತಿತ್ತು. ಹಣೆಯ ಮೇಲೆಲ್ಲಾ ಪದೇ ಪದೇ ಬೆವರ ಹನಿ ಸಾಲಿಕ್ಕುತ್ತಿದ್ದವು.ಕುಳಿತಲ್ಲಿ ಕೂಡಲಾಗುತ್ತಿರಲಿಲ್ಲ. ಕೈಯಲ್ಲಿಡಿದಿದ್ದ ದಿನ ಪತ್ರಿಕೆಯೇ ಭಾರವಾಗಿತ್ತು.ದೇಹವೆಂಬುದು ಮನಸನ್ನ ಹೊತ್ತುತಿರುಗುತ್ತದೆ.ಮನಸ್ಸು ಭಾರವಾದಾಗ ದೇಹ ನಿಸ್ತೇಜ ಹೊಂದುತ್ತದಂತೆ.
    ಈಗ ನನ್ನ ದೇಹವೇಕೆ ನಿಸ್ತೇಜ ಹೊಂದಿದೆ? ಎಂದು ನನ್ನ ಮನಸ್ಸನ್ನ ಕೇಳಿಕೊಂಡಾಗ ಅರಿವಿಗೆ ಬಂದಿತ್ತು ಇಂದು ನಮ್ಮಿಬ್ಬರ ಅಗಲುವಿಕೆಯ ದಿನ. ಆರು ವರ್ಷಗಳಿಂದ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದೆಲ್ಲಾ ಸುಳ್ಳೆಂದು ಹೇಳುವ ದಿನ ಹಾಗೂ ಎಷ್ಟೇ ದುಃಖವಿದ್ದರೂ ನಗೆಯ ಮುಖವಾಡ ಧರಿಸಿ ವಿದಾಯ ಹೇಳುವ ದಿನವಾದ್ದರಿಂದ ನನ್ನ್ನ ಮನಸ್ಸು ದಿಕ್ಕು ತಪ್ಪಿದ ನಾವೆಯಂತೆ, ಕೊಡೆ ಕಂಡು ಬೆದರುವ ಹೋರಿಯಂತೆ,ನೀರಿನಿಂದ ಹೊರಬಿದ್ದ ಮೀನಿನಂತೆ, ಹೆಣ್ಣು ದೇವರ ಗುಡಿಯ ಮುಂದೆ ದೆವ್ವಬಂದವನು ಸುತ್ತವ ಹಾಗೆ ಬಸ್ ನಿಲ್ದಾಣದ ತುಂಬೆಲ್ಲಾ ಸುತ್ತಾಡಿದ್ದೇ ಸುತ್ತಾಡಿದ್ದು. ಸುತ್ತಾಡಿ ಸುಸ್ತಾಗಿ ತುಸುಹೊತ್ತು ಮತ್ತೆ ಕುಳಿತುಕೊಳ್ಳಲು ಸ್ಥಳ ನೋಡುತ್ತಿಂತೆ ಬಂದಿದ್ದಳು ಅವಳು.
         ಬಂದ ತಕ್ಷಣ “ಹೇಗಿದ್ದೀಯ” ಅನ್ನಲಿಲ್ಲ. ಬಂದು ಬಹಳ ಹೊತ್ತಾಯ್ತಾ…? ಅನ್ನಲಿಲ್ಲ. ಕಣ್ಣಲ್ಲೇ ಸನ್ನೆಮಾಡಿ ಹೋಟಲೊಂದಕ್ಕೆ ಕರೆದೊಯ್ದು ಸಕ್ಕರೆ ಇಲ್ಲದ ಚಹಾಕ್ಕೆ ಆರ್ಡ್ರರ್ ಮಾಡಿದ್ದಳು. ಯಾಕೆಂದು ನಾನೂ ಕೇಳಲಿಲ್ಲ. ಇಂದಿನಿಂದ ಸಕ್ಕರೆರಹಿತ ಚಹಾ ಕುಡಿಯೋಣ ಎಂಬಂತಿತ್ತು ಅವಳ ಆ ಮೌನ. ಆವರಿಸಿಕೊಂಡಿದ್ದ ಮೌನವನ್ನ ಮುರಿಯುವ ತಾಕತ್ತು ನನ್ನಲ್ಲಿರಲಿಲ್ಲ.
ದುಃಖಕ್ಕಿಂತ ಮೌನ ಏನು ಮಹಾ..? ಮೌನದಾ ಕೋಟೆಯನ್ನು ಸೀಳಿ ಕಣ್ಣೀರಿನ ಮೂಲಕ ಹೊರಗೆ ಬಂದಿತ್ತು ಅವಳ ದುಃಖ. ಅವಳ ದುಃಖಭರಿತ ಕಣ್ಣೀರಿನ ಕಣ್ಣನ್ನು ನೋಡಿದಾಕ್ಷಣ ನನಗೇ ಗೊತ್ತಿಲ್ಲದೆ ನನ್ನೊಳಿಗಿನ ನಾನು ಬಿಕ್ಕಳಿಸತೊಡಗಿದೆ. ಜೇಬಿನಲ್ಲಿದ್ದ ಕರವಸ್ತ್ರ ಕಣ್ಣಲ್ಲಿ ನೀರು ಬರುತ್ತಲಿದೆ ಎಂದು ಎಚ್ಚರಿಸಿ
ದಾಗಲೇ ವಾಸ್ತವಕ್ಕೆ ಬಂದು ಮುಂದಿದ್ದ ಚಹಾದ ಕಪ್ಪನ್ನು ಅವಳ ಕೈಗೆ ತಗುಲಿಸಿದೆ, “ಹಾಂ” ಅಂದಳು.
ಕೆನ್ನೆಯ ಮೇಲಿನ ಕಣ್ಣೀರನ್ನು ತುದಿಬೆರಳಲ್ಲೇ ಸವರಿಕೊಳ್ಳುತ್ತಾ ತನ್ನ ಜಂಭದ ಚೀಲದಿಂದ ನಾ ಅವಳಿಗೆ ಬರೆದಿದ್ದ ಪ್ರೇಮ ಪತ್ರಗಳನ್ನೆಲ್ಲಾನನ್ನ ಮುಂದೆ ಹೊರತೆಗೆದು ಗುಡ್ಡೆ ಹಾಕಿದ್ದಳು. ಎಂದೋ ನಾ ಬರೆದು ಮರೆತಿದ್ದ ಕವಿತೆಗಳನ್ನು ನನ್ನ ಕೈಗಿಟ್ಟಳು. ಕಾರ್ತಿಕ ಮಾಸದಲ್ಲಿ ಮಾಡಿಸಿಕೊಟ್ಟ ಸರವನ್ನು ಬಿಚ್ಚಿ ಪಕ್ಕಕ್ಕಿಟ್ಟಳು. ಕೊನೆಯದೆಂಬತೆ  ನನ್ನ ಕೈಗೊಂದು ಲಕೋಟೆಯನ್ನಿಟ್ಟು ಚಹಾದ ಬಿಲ್ ಹಿಡಿದು ಹೊರಟುಹೋದಳು. ಅವಳು ನನ್ನ ಕಣ್ಣಿಂದ ಮರೆಯಾಗುವವರೆಗೂ ನೋಡಿದೆ.ಒಮ್ಮೆಯೂ ತಿರುಗಿ ನೋಡದೇ ಅದ್ಯಾವುದೋ ಬಸ್ಸನ್ನೇರಿ ಹೋದಳು. ಅವಳು ಹಿಂದಿರುಗಿಸಿದ್ದ ಪ್ರತಿಯೊಂದು ಪತ್ರವನ್ನೂ ನನ್ನ ಹೆಗಲ ಚೀಲದಲ್ಲಿ ತುಂಬಿಕೊಂಡಿದ್ದೆ. ನಂತರ ಕೊನೆಯದಾಗಿ ಕೊಟ್ಟುಹೋದ ಪತ್ರದ ಮಡಿಕೆಗಳನ್ನು ಬಿಡಿಸಿ ನೋಡಿದಾಗ; ನಿಜಕ್ಕೂ ನಾ ತಬ್ಬಿಬ್ಬಾಗಿದ್ದೆ.
ನನ್ನೊಲಿವಿನ ಹುಡುಗನೇ……!
ನಾ ನಿನಗೇ ಬರೆಯುವ ಪತ್ರ ಕೊನೆಯದೇನೋ? ನಾನು ನೀನೂ ಒಮ್ಮೆಯೂ ಮಾತಾನಾಡದೆ ಆರು ವರ್ಷಗಳು ನಿರಂತವಾಗಿ ಪ್ರೀತಿಸಿದ್ದೆವು ಎಂದರೆ ಪ್ರಾಯಶಃ ಈ ಸಮಾಜ ನಂಬುವುದಿಲ್ಲ. ಯಾರ ನಂಬುಗೆಯೂ ನಮಗೆ ಅವಶ್ಯಕವಾಗಿರಲಿಲ್ಲ.ಪತ್ರದಲ್ಲಿಯೇ ಭಾವನೆಯನ್ನು ಹಂಚಿಕೊಂಡು,ಕಣ್ಣಲ್ಲೇ ಸೌಂದರ್ಯ ಸವಿಯುತ್ತ, ತುಟಿಯಂಚಿನ ಮೂಲಕ ಮುಗುಳ್ನಗೆಯ ಸಂಭಾಷಣೆ ನಡೆಸಿದ್ದೆವೆಂದರೆ;
ಮೇಲಿನ ದೇವರೆಂಬ ದೇವರೂ ನಂಬುತ್ತಾನೋ ಇಲ್ಲವೋ? ಅದರೆ ನಮ್ಮಿಬ್ಬರ ಹೃದಯಗಳು ಒಂದನ್ನೊಂದು ಅರ್ಥೈಸಿಕೊಂಡು ಪ್ರೀತಿಸುತ್ತಿದ್ದವು ಎಂದರಿತದ್ದು ಮಾತ್ರ ಸತ್ಯ ಅಲ್ವಾ..? ನೀನು ನನ್ನ ಪ್ರೀತಿಸುವುದಕ್ಕಿಂತ ಮುಂಚೆ ಅಂದರೆ ಸ್ನೇಹ ಪೂರ್ವಕವಾಗಿ ಬರೆಯುತಿದ್ದ ಪತ್ರಗಳಲ್ಲಿ ನನ್ನ ಬಗ್ಗೆ ನನ್ನ ಮನೆಯ ಸದಸ್ಯರ ಬಗ್ಗೆ, ಮುಂದಿನ ಗುರಿ ಉದ್ದೇಶಗಳ ಬಗ್ಗೆ ಸವಿಸ್ತಾರವಗಿ ತಿಳಿದುಕೊಳ್ಳಲು ಹವಣಿಸುತ್ತಿದ್ದೆಯಾದರೂ, ನಾನು ಏನೆಂದರೆ ಏನೂ ಹೇಳಿಕೊಳ್ಳದೆ ನಾ ನಿನ್ನ ಪ್ರೀತಿಸುತ್ತಿದ್ದೀನಿ ಎಂದಷ್ಟೇ ಹೇಳಿದ ಮೇಲೆ ನಿನ್ನ ಪತ್ರದ ಶೈಲಿಯೇ ಬದಲಿಯಾಯಿತು. ಬರೀ ಪ್ರೀತಿಯ ಬಗ್ಗೆ, ಮುಂದಿನ ಜೀವನದ ಬಗ್ಗೆ ಕನಸುಗಳನ್ನ ಹೆಣೆಯುತ್ತಾ ಭ್ರಮಾಲೋಕದಲ್ಲಿಯೇ ವಿಹರಿಸಿಬಿಟ್ಟೆವು.
ನಿನಗಿನ್ನೊಂದು ವಿಷಯ ಗೊತ್ತಿರಲಿಕ್ಕಿಲ್ಲ ಮತ್ತು ಈಗಲೂ ನಿನ್ನಗೆ ಗೊತ್ತಿಲ್ಲ. ಅಲ್ಲಿ ನಾನಿದ್ದ ಮನೆ ನನ್ನ ತಂದೆ ತಾಯಿಯರದಲ್ಲ. ಅದು ನನ್ನ ತಾಯಿಯ ತಂಗಿಯ ಮನೆ. ಅಂದರೆ ಚಿಕ್ಕಮ್ಮಳ ಮನೆ. ನಾನು ಚಿಕ್ಕವಳಿದ್ದಾಗಲೇ ತಂದೆ- ತಾಯಿಯರನ್ನು ಕಳೆದುಕೊಂಡ ನತದೃಷ್ಟೆ. ಯಾವುದೋ ವಾಹನ ಅಪಘಾತದಲ್ಲಿ ಇಬ್ಬರೂ ಸಾವ್ನ್ನಪ್ಪಿದ್ದರಂತೆ. ಯಾರೂ ಇಲ್ಲದೇ ಅನಾಥೆಯಾಗಿದ್ದ ನನಗೆ ಚಿಕ್ಕಮ್ಮಳೇ ಆಶ್ರಯಕೊಟ್ಟಿದ್ದಳು. ಅವರ ಸ್ವಂತ ಮಗಳಿಗಿಂತ ಚನ್ನಾಗಿನೋಡಿಕೊಂಡು ವಿದ್ಯಾಭ್ಯಾಸ ಕೊಡಿಸಿದರು. ಬದುಕು ಸರಳರೇಖೆಯಂತೆಯೇ ನಡೆದಿತ್ತು. ಅದ್ಯಾವ ಘಳಿಗೆಯಲ್ಲಿ ನೀ ಬಂದು ನಮ್ಮ ಮನೆಯ ಪಕ್ಕದಲ್ಲಿಯೇ ಮನೆ ಮಾಡಿದೆಯೋ? ಅಂದಿನಿಂದ ನನ್ನ ಮನಸ್ಸು ಹಿಡಿತದಲ್ಲಿರಲಿಲ್ಲ. ನಿನ್ನ ಕಣ್ಣಿನ ಮೊನಚಾದ ನೋಟಕ್ಕೆ ಸೋತು ಬಿಟ್ಟೆ.ಸೋತ ದಿನದಿಂದಲೇ ಗೋಡೆಯ ಮಧ್ಯದ ಕಿಟಕಿಯಿಂದ ಪತ್ರ ವಿನಿಮಯವಾದದ್ದು ಮತ್ತು ಇಲ್ಲದ್ದನ್ನ ಕಲ್ಪಿಸಿಕೊಂಡದ್ದು.
ನಿನ್ನದೊಂದು ಪತ್ರ ಚಿಕ್ಕಮ್ಮಳ ಕೈಗೆ ಅದು ಹೇಗೆ ಸಿಕ್ಕಿತೋ..? ನಾ ಕಾಣೆ. ಅವತ್ತಿನ ಸ್ಥಿತಿ ಹೇಳತೀರದು.”ತಾಯಿ ಇಲ್ಲದ ಮಗಳು ಅಂತ ಸಲುಗೆಯಿಂದ ಬಿಟ್ಟಿದ್ದಕ್ಕೆ ಈ ರೀತಿ ಮಾಡ್ತಾಇದ್ದೀಯ? ಯಾವನೋ ಗೊತ್ತು ಗುರಿ ಇಲ್ಲದ ಆ ಕರಿಯನನ್ನು ಛಿ,, ನಿನ್ನ ಚಿಕ್ಕಪ್ಪನಿಗೆ ಹೇಳಿದ್ರೆ ನಿನ್ನ ಮೂಳೆ ಮುರಿದು … ನನ್ನನ್ನೂ ಕೊಚ್ಚಿ ಹಾಕ್ತಾರೆ.
ನನ್ನ ಅಕ್ಕ ಅಂಥವಳಲ್ಲ, ಅಂದ್ರೆ ನಿನ್ನಮ್ಮ. ದಯಮಾಡಿ ನನ್ನ ಅಕ್ಕಳ ಹೆಸರಿಗೆ ಚ್ಯುತಿ ತರಬೇಡ. ಇದೇ ಮಾಸದಲ್ಲಿ ನಿನಗೆ ಗಂಡು ಹುಡುಕಿ ಮದುವೆ ಮಾಡ್ತೀವಿ. ನಮಗೆ ಸ್ವಲ್ಪನಾದ್ರೂ ಬೆಲೆ ಕೊಡೋದಾದ್ರೆ,ನೀನಿಂದೇ ಬಳ್ಳಾರಿಯ ನಮ್ಮ ಸಂಬಂಧಿಕರ ಮನೆಗೆ ಹೋಗಿರು.
ನೀನು ಇವತ್ತೇ ಬರ್‍ತಾ ಇದ್ದೀ ಅಂತ ಅವರಿಗೆ ಪೋನ್ ಮಾಡಿ ಹೇಳ್ತೀನಿ”.  ಅಳುವುದಕ್ಕೂ ಆಸ್ಪದ ಕೊಡದೇ ಪೋನ್ ಮಾಡಿಟ್ಟ ತಕ್ಷಣ ನನ್ನ ಬಟ್ಟೆಗಳನ್ನೆಲ್ಲಾ ಚಿಕ್ಕಮ್ಮಳೇ ಒಂದು ಚೀಲಕ್ಕೆ ತುಂಬಿ, ನೂರರ ಮೂರು ನೋಟು ಕೊಟ್ಟು,, ಬಸ್ ನಿಲ್ದಾಣಕ್ಕೆ ಅವಳೇ ಬಂದು ಬಸ್ಸನ್ಹತ್ತಿಸಿಬಿಟ್ಟಳು.
ಅಂಥ ಸಮಯದಲ್ಲಿ ನಿನಗೊಂದು ಪತ್ರ ಗೀಚಿ ಕಿಟಕಿಯೊಳಗೆ ಹಾಕಲು ಅವಕಾಶ ಸಿಗಲಿಲ್ಲ. ಇಲ್ಲಿಗೆ ಬಂದನಂತರ; ನಿನಗೆ ಬಳ್ಳಾರಿಗೆ ಬಂದು ಹೋಗಲು ಚಿಕ್ಕ ಪತ್ರ ಬರೆದೆ ಮತ್ತು ನೀನು ಬಂದೇ ಬರುತ್ತೀ ಎಂಬ ಭರವಸೆಯಲ್ಲಿಯೇ ನಿನ್ನೊಂದಿಗೆ ಮಾತಿಗಿಳಿಯಲು ಭಯವಾಗುತ್ತದೆಂದೇ ನೀನೀಗ ಓದುತ್ತಿರುವ ಪತ್ರ ಬರೆದಿಟ್ಟುಕೊಂಡಿದ್ದೆ ಹಾಗೂ ನಿನಗೆ ಬರಲು ತಿಳಿಸಿದ ಪತ್ರದಲ್ಲಿ;  ಇಂದು ನಾವಿಬ್ಬರೂ ಕೊನೆಯದಾಗಿ ಅಗಲುವ ದಿನ, ಎಂದು ಬರೆದಿದ್ದೆ.ಪ್ರಾಯಶಃ ಮನಸ್ಸಿಗೆ ತುಂಬಾ ವೇದನೆಯಾಗಿರಬೇಕು…ಅದಕ್ಕಾಗಿ ನಿನ್ನಲ್ಲಿ ಕ್ಷಮೆಯಾಚಿಸುವೆ.ನಮ್ಮಿಬ್ಬರ ಮಧ್ಯೆ ಪರಿಸ್ಥಿತಿ ಈ ರೀತಿಯಲ್ಲಿ ಹಿಂಸಿಸುತ್ತದೆಂದು ನಾನು ನಿಜಕ್ಕೂ ಊಹಿಸಿರಲಿಲ್ಲ. ನಿನ್ನ ಜೀವನವಾದರೂ ಸುಖಕರವಾಗಿರಲಿ.
                  ಇಂತಿ
                      ನಿನ್ನಿಂದ ದೂರಾದಗೆಳತಿ….

ಹೀಗೆ ಬರೆದು ದೂರಾದ ಗೆಳತಿಯನ್ನು ಶಪಿಸದೆ, ಅವಳ ನೆನಪಿನಲ್ಲಿಯೇ ದಿನಗಳನ್ನು ಕಳೆದೆ. ಅವಳಿಗೆ ಮದುವೆಯಾಯಿತೆಂದು ಕೆಲವು ದಿನಗಳ ಬಳಿಕ ಅವಳ ಚಿಕ್ಕಮ್ಮನ ಮಗಳೇ ರಸ್ತೆಯ ಬದಿಯಲ್ಲೊಮ್ಮೆ ಹೇಳಿದ್ದಳು. ಇದಾಗಿ ಐದು ವರ್ಷಗಳ ನಂತರ ಅದೇ ಹುಡುಗಿಯ ಹಸ್ತಾಕ್ಷರದ ಪತ್ರವೊಂದು ಪುನಃ ಬಂದಿತ್ತು.
“ಪ್ರೀತಿಯ ಹುಡುಗಾ…..!

ಹೇಗಿದ್ದೀಯಾ? ನಾನು ಕಣೋ! ಅದೇ ಮಾತನಾಡದ ಮೌನಗೌರಿ. ನಿನ್ನನ್ನು ತುಂಬ ನೋಡಬೇಕೆನಿಸಿದೆ.ಈ ನಿಮಿತ್ತ ನೀನು ಇದೇ ಭಾನುವಾರ ಪ್ರೀತಿಗೆ ವಿದಾಯ ಹೇಳಿದ ಹೋಟಲ್ಲಿನಲ್ಲಿ; ಮಧ್ಯಾಹ್ನ ಒಂದು ಗಂಟೆಗೆ ನನ್ನನ್ನು ಭೇಟಿಯಾಗಲೇಬೇಕು. ಇದು ನನ್ನ ಕೊನೆಯ ಆಸೆ. ನೀನು ಬಂದೇ ಬರುತ್ತೀ ಎಂದು ಬಲವಾಗಿ ನಂಬಿದ್ದೇನೆ”.
                     ಇಂತಿ..ನಿನ್ನ….
  ಪತ್ರ ಕೈಯಲ್ಲಿ ಹಿಡಿದುಕೊಂಡೇ ಯೋಚಿಸಿದೆ. ಹೋಗಲೋ? ಬೇಡವೋ..? “ಇದು ಕೊನೆಯ ಭೇಟಿ” ಎಂದಿದ್ದಾಳೆ. ಹೋದರಾಯ್ತೆಂದು ನಿರ್ಧರಿಸಿಯೇ ಮೇಲೆದ್ದೆ.
ಪತ್ರ ಶನಿವಾರವೇ ಬಂದಿತ್ತಾದ್ದರಿಂದ; ಮಾರನೆಯ ದಿನ ಮುಂಜಾನೆ ಏಳು ಗಂಟೆಗೇ ರಡಿಯಾಗಿ ಬಳ್ಳಾರಿಯ ಬಸ್ಸು ಹತ್ತಿ ಕುಳಿತೆ. ಮೂರುವರೆ ತಾಸಿನ ಹಾದಿ.ಬಳ್ಳಾರಿ ಬಂದದ್ದೇ ಗೊತ್ತಾಗಲಿಲ್ಲ. ಏಕೆಂದರೆ ನನ್ನ ಮನಸ್ಸೆಲ್ಲಾ ಅವಳ ಕುರಿತೇ ಯೋಚಿಸುತ್ತಿತ್ತಾದ್ದರಿಂದ ಕಲ್ಪನಾಲೋಕದಲ್ಲಿ ಸಾಗಿದ ಹಾದಿ ಅರವಿಗೆ ಬರಲಿಲ್ಲ. ಬಸ್ಸಿಳಿದ ನಂತರ ಅದೇ ಐದು ವರ್ಷದ ಕೆಳಗೆ ಭಿಕ್ಷೆ ಬೇಡುತ್ತ ಕುಳಿತಿದ್ದ ಮುದುಕಿಯನ್ನೇ ವೀಕ್ಷಿಸಿದೆ. ಹಾಗೆಯೇ ಇದ್ದಾಳೆ. ಆದರೆ ಮುಖದ ಮೇಲಿನ ಸುಕ್ಕುರೇಖೆಗಳು ತೀರಾ ಕಪ್ಪಾಗಿವೆ. ಬಟಾಣಿ ಮಾರುತ್ತಿದ್ದ ಹುಡುಗ ಕಾಣಿಸುತ್ತಿಲ್ಲ. ಬಹುಶಃ ಈಗ ಪೇಪರ್ ಮಾರುತ್ತಿರಬಹುದೇನೋ..? ಎಂದು ಕೊಂಡು ಸುಮ್ಮನಾದೆ.
ಆವತ್ತಿದ್ದ ಆತಂಕ ಇವತ್ತಿರಲಿಲ್ಲ. ಏಕೆಂದರೆ ಮನಸ್ಸೆಂದೋ ಮುರಿದು ಕಲ್ಲಂತಾಗಿದ್ದರಿಂದ; ಭಾವನೆಗಳೆಲ್ಲಾ ನಾಶವಾಗಿ ನಿರ್ಭಾವುಕನಾಗಿದ್ದೆ. ಅದೇಕೋ ಕಾಣೆ ಅವಳ ಅದ್ಯಾವ ಮಾಯೆಯಲ್ಲಿ ಪುನಃ ಬಳ್ಳಾರಿಗೆ ಬರುವಂತೆ ಮಾದಿತೋ? ಗೊತ್ತಿಲ್ಲ. ಮನದಲ್ಲಿ ನೂರಾರು ಆಲೋಚನೆಗಳು ಬಂದು ಹೋದರೂ ಅವಳೇಕೆ? ಇಲ್ಲಿಗೆ ಬರಲು ಹೇಳಿದ್ದಾಳೆಂದು ಉತ್ತರ ಸಿಗಲಿಲ್ಲ. ಇನ್ನೇನು ಗಂಟೆ ಒಂದಾಯ್ತು, ಅವಳೇ ಬರ್‍ತಾಳಲ್ಲ! ಎಂದು ನಿರ್ಧರಿಸಿ ಅದೇ ಹೋಟಲ್ ಕಡೆ ಹೆಜ್ಜೆ ಹಾಕಿದೆ.
ನಾ ಅಂದು ಕೊಂಡಂತೆ ಅದೇ ಸ್ಥಳದಲ್ಲಿ ಮಗುವೊಂದಕ್ಕೆ ಯಾವುದೋ ಹಣ್ಣನ್ನು ತಿನ್ನಿಸುತ್ತ ಕುಳಿತಿದ್ದಳು.
ಬಹಳ ದಿನಗಳ ನಂತರ ನನ್ನನ್ನು ಕಂಡದ್ದಕ್ಕೆ ವಿಚಲಿತಗೊಳ್ಳಲಿಲ್ಲ. ಬದಲಾಗಿ ಶಾಂತ ವರ್ತನೆಯಲ್ಲಿಯೇ.. ಮುಂದಿದ್ದ ಖಾಲಿ ಕುರ್ಚಿಗೆ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದಳು. ಅದೇ ಸಕ್ಕರೆ ರಹಿತ ಚಹಾ ಆರ್ಡರ್ ಮಾಡಿಯೂ ನನ್ನನ್ನು ಕತ್ತೆತ್ತಿ ನೋಡಲಿಲ್ಲ. ಚಹಾ ಕುಡಿವಾಗ ಮಾತ್ರಾ ಒಂದೇ ಒಂದು ಬಾರಿ ಅಂತಃಕರಣ ತುಂಬಿದ ನೋಟ ಬೀರಿದಳು. ಕಪ್ಪಿನೊಳಗಿನ ಚಹಾ ಮುಗಿಯುತ್ತಾ ಬಂದರೂ, ಒಂದೇ ಒಂದು  ಮಾತೂ ಆಡದ ಇವಳನ್ನ ಏನೆಂದು ಅರ್ಥೈಸಿಕೊಳ್ಳಲಿ? ಎಂದು ತಲೆ ಕೆರದುಕೊಳ್ಳುವಷ್ಟರಲ್ಲಿ; ನನ್ನ ಮುಂದೊಂದು ಲಕೋಟೆಯನ್ನಿಟ್ಟು ಮಗುವನ್ನೆತ್ತಿಕೊಂಡು ಹೊರಟೇ ಹೋದಳು. ಹಿಂದಿರುಗಿ ನನ್ನ ಊರಿಗೆ ಬರುವವರೆಗೂ, ಆ ಲಕೋಟೆಯೊಳಗೆ ಏನಿದೆ? ಎಂದು ಕುತೂಹಲಕ್ಕೂ ತೆರೆದು ನೋಡಲಿಲ್ಲ. ಹುಡಿಗಿಯರ ಮನಸ್ಸೇಕೆ ಇಷ್ಟೊಂದು ವಿಚಿತ್ರ? ಇವರನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡ ಒಬ್ಬ ತಗ್ನನಾದರೂ ನಾನು ಸಾಯುವುದರೊಳಗಾಗಿ ನನಗೆ ಸಿಗಬಲ್ಲನೇ? ಎಂದು ಯೋಚಿತ್ತಲೇ ಕೋಣೆಯ ಬಾಗಿಲು ಹಾಕಿಕೊಂಡು ಅವಳ ಲಕೋಟೆಯೊಳಗಿನ ಪತ್ರ ಬಿಡಿಸಿ ಓದತೊಡಗಿದೆ.
  ಹೇ.. ಹುಡುಗಾ..,
  ಹಿಂದಿನ ಬಾರಿ ಬರೆದ ಪತ್ರವೇ ಕೊನೆ ಎಂದು ಬರೆದಿದ್ದೆ. ಆದರೆ ಕೊನೆಯದೆಂದು ಬರೆದಾದ ನಂತರವೂ ನಿನಗೆ ಎರಡು ಪತ್ರ ಬರೆದೆ. ಒಂದು ಬಳ್ಳಾರಿಗೆ ಬರಲು ಬರೆದೆ. ನಂತರ ನೀನೀಗ ಓದುತ್ತಿರುವ ಪತ್ರ ಬರೆದೆ. ಈ ಪತ್ರವನ್ನು ನಿನಗೆ ಬರೆಯಲೇ ಬೇಕಿತ್ತು. ಅಂಚೆಯ ಮೂಲಕ ರವಾನಿಸೋಣವೆಂದುಕೊಂಡೆ. ಆದರೆ ಇನ್ನೊಮ್ಮೆ ಮುಖಾ-ಮುಖಿ ನೋಡಬೇಕೆನಿಸಿದ ಪರಿಣಾಮ ನಿನ್ನನ್ನು ಭೇಟಿಯಾಗಲು ತಿಳಿಸಿದೆ. ಅಂದಹಾಗೆ ಹಿಂದಿನ ತಿಂಗಳು ನೀ ನಂಬದ ದೇವರು ನನ್ನ ತಾಳಿಯನ್ನ ಕಿತ್ತುಕೊಂಡ. ನೀನು ಬಂದಾಗ; ನಾನು ಕತ್ತು ಬಗ್ಗಿಸಿ ಕುಳಿತದ್ದು ನಿನ್ನ ಕಣ್ಣಿನ ನೋಟ ಎದುರಿಸಲಾಗದೇ ಅಲ್ಲ, ಕತ್ತಿನಲ್ಲಿರದ ಮಾಂಗಲ್ಯ ಎಲ್ಲಿ? ಎಂದು ಕೇಳಬಾರದೆಂದು. ನನ್ನ ಗಂಡನೆಂಬುವವನು ಹೊಟ್ಟೆಕಿಚ್ಚಿಗಾಗಿ ನನಗೆ ಗಂಡು ಮಗು ಕೊಟ್ಟು ಹೋಗಿದ್ದರೂ, ಆ ಮಗುವಿಗಾಗಿ ನಾನು ಬದುಕಿದ್ದೇನೆಂದು ತಿಳಿಯಬೇಡ. ನಿಜಕ್ಕೂ ನಿನ್ನನ್ನು ಇನ್ನೊಮ್ಮೆ ನನ್ನ ಕಣ್ಣಲ್ಲಿ ತುಂಬಿಕೊಳ್ಳಲು ಬದುಕಿದ್ದೆ.
ನಾನು ಸಾಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಸತ್ತು ಸಾಧಿಸುವುದಾದರೂ ಏನು? ಎಂಬ ಎಲ್ಲರ ಪ್ರೆಶ್ನೆಯನ್ನು ಧಿಕ್ಕರಿಸಿದ್ದೇನೆ. ಏಕೆಂದರೆ ನನ್ನ ಸ್ಥಾನದಲ್ಲಿ ನೀನಿದ್ದರೂ, ಇದೇ ನಿರ್ಧಾರಕ್ಕೆ ಬರುತ್ತಿದ್ದೆ.
ಕಾರಣ ಸತ್ತು ಹೋಗಿರುವ ನನ್ನ ಗಂಡ ಆಕಸ್ಮಿಕವಾಗಿ ಸತ್ತಿಲ್ಲ. ಏಡ್ಸ್ ಎಂಬ ಭಯಂಕರ ರೋಗಕ್ಕೆ ತುತ್ತಾಗಿ ಸತ್ತಿದ್ದಾನೆ. ಮಗುವಿಗೂ ಅವನದೇ ರಕ್ತ. ಅಂದರೆ ಮಗುವಿನಲ್ಲಿಯೂ ಎಚ್.ಐ.ವಿ. ವೈರಸ್ಗಳಿವೆ,ನಾನು ಮತ್ತು ನನ್ನ ಮಗು ಬಹಳ ದಿನ ಬದುಕಲಾರೆವು. ಬದುಕಿದಷ್ಟೂ ಸಮಾಜದಲ್ಲಿ ಅವಮಾನ ಭರಿಸಲಾರೆವು.
ಅದಕ್ಕೆಂದೇ ನನ್ನ ಈ ನಿರ್ಧಾರ. ಅಂದು ಪ್ರೀತಿಗೆ ವಿದಾಯ ಹೇಳಿದೆ. ಇಂದು ಬದುಕಿಗೆ ವಿದಾಯ ಹೇಳುತ್ತಿದ್ದೇನೆ. ಮುಂದಿನ ಜನ್ಮದಲ್ಲಾದರೂ ಒಂದಾಗಲು ದೇವರಲ್ಲಿ ಬೇಡಿಕೊಳ್ಳೋಣವೆಂದರೆ; ನೀನು ದೇವರನ್ನೇ ನಂಬದ ನಾಸ್ತಿಕ! ನೀನಾದರೂ ಇದ್ದಷ್ಟು ದಿನ ಧರೆಯ ಮೇಲೆ ಚನ್ನಾಗಿರು..
                                         ಇಂತಿ..
                         ನಿನ್ನಿಂದ ಶಾಶ್ವತವಾಗಿ ದೂರಾಗುತ್ತಿರುವ ಗೆಳತಿ…….
ಪತ್ರ ಓದುತ್ತಿದ್ದಂತೆ ಕಣ್ಣಲ್ಲಿನ ನೀರು ಕೆನ್ನೆಯ ಮೇಲೆ ಹೆಪ್ಪುಗಟ್ಟಿದ್ದವು. ಇದು ನನ್ನ ಮತ್ತು ಅವಳ ಕಥೆ…!
               ನಾಗರಾಜ್, ತಳವಾರ್